ADVERTISEMENT

ಸಾಹಿತಿ, ಕಲಾವಿದರಿಗೆ ಸಚಿವರಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 12:11 IST
Last Updated 4 ನವೆಂಬರ್ 2021, 12:11 IST
ಬೀದರ್‌ನಲ್ಲಿ ಸಾಹಿತಿಗಳಾದ ಬಸವರಾಜ ಬಲ್ಲೂರ ಹಾಗೂ ವಿದ್ಯಾವತಿ ಬಲ್ಲೂರ ಅವರನ್ನು ಸಚಿವ ಪ್ರಭು ಚವಾಣ್‌ ಸನ್ಮಾನಿಸಿದರು
ಬೀದರ್‌ನಲ್ಲಿ ಸಾಹಿತಿಗಳಾದ ಬಸವರಾಜ ಬಲ್ಲೂರ ಹಾಗೂ ವಿದ್ಯಾವತಿ ಬಲ್ಲೂರ ಅವರನ್ನು ಸಚಿವ ಪ್ರಭು ಚವಾಣ್‌ ಸನ್ಮಾನಿಸಿದರು   



ಬೀದರ್‌: ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಸಾಹಿತ್ಯ ಸಂಗಮ’ ವಿನೂತನ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಜಿಲ್ಲೆಯ ಸಾಹಿತಿ ಹಾಗೂ ಕಲಾವಿದರ ಮನೆಗಳಿಗೆ ಭೇಟಿ ಕನ್ನಡದ ಕೃತಿಗಳನ್ನು ನೀಡಿ ಗೌರವಿಸಿದರು.

ಸಚಿವರನ್ನು ತಮ್ಮ ಮನೆಗಳಿಗೆ ಗೌರವಾದರಗಳಿಂದ ಬರಮಾಡಿಕೊಂಡ ಸಾಹಿತಿಗಳು ಮತ್ತು ಕಲಾವಿದರು ಕೂಡ ಸಚಿವರಿಗೆ ಶಾಲುಹೊದಿಸಿ ಸನ್ಮಾನಿಸಿದರು. ಸಚಿವರ ಭೇಟಿಯಿಂದ ಖುಷಿಯಾಗಿದೆ. ಬರೆಯಲು, ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಸ್ಫೂರ್ತಿ ದೊರಕಿದೆ ಎಂದು ಸಾಹಿತಿಗಳು ಮತ್ತು ಕಲಾವಿದರು ಪ್ರತಿಕ್ರಿಯಿಸಿದರು.

‘ಸತತ ಮೂರನೇ ವರ್ಷ ಜಿಲ್ಲೆಯ ಸಾಹಿತಿಗಳ ಮತ್ತು ಕಲಾವಿದರ ಮನೆಗೆ ಭೇಟಿ ನೀಡಿ ಅವರಿಗೆ ಗೌರವಿಸುತ್ತಿದ್ದೆನೆ.
ಸಾಹಿತಿಗಳ ಮತ್ತು ಕಲಾವಿದರ ಮನೋಬಲ ಹೆಚ್ಚಿಸಲು ಈ ಸಾಹಿತ್ಯ ಸಂಗಮ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಸಂಪುಟ ದರ್ಜೆಯ ಸಚಿವರು ಸಾಹಿತಿಗಳ ಮನೆಗೆ ಭೇಟಿ ನೀಡಿ ಗೌರವಿಸುತ್ತಿರುವುದು ಐತಿಹಾಸಿಕವಾದುದಾಗಿದೆ. ಜಿಲ್ಲೆಯಲ್ಲಿ ಕನ್ನಡ ಭವನ ತಲೆ ಎತ್ತಲು ಸಚಿವ ಪ್ರಭು ಚವಾಣ್ ಅವರೇ ಕಾರಣ. ಅವರ ಕನ್ನಡ ಕಾರ್ಯ ಪ್ರಸಂಶನೀಯವಾಗಿದೆ’ ಎಂದು ತಿಳಿಸಿದರು.

ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘ರಾಜ್ಯದ ಇತಿಹಾಸದಲ್ಲಿ ಸಚಿವರು ಸಾಹಿತಿಗಳ ಮನೆಗೆ ಹೋಗಿ ಸನ್ಮಾನ ಮಾಡಿರುವ ಉದಾಹರಣೆ ಇಲ್ಲ. ಈ ಉತ್ತಮ ಪರಂಪರೆಯನ್ನು ಆರಂಭಿಸಿದ ಕೀರ್ತಿ ಪ್ರಭು ಚವಾಣ್ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಸಾಹಿತಿಗಳಾದ ಭಾರತಿ ವಸ್ತ್ರದ, ವಿದ್ಯಾವತಿ ಬಸವರಾಜ ಬಲ್ಲೂರ, ಕಸ್ತೂರಿ ಪಟಪಳ್ಳಿ, ಚೆನ್ನಬಸವ ಹೆಡೆ, ಶಿವಲಿಂಗ ಹೆಡೆ, ಮಹೇಶ್ವರಿ ಹೆಡೆ, ಪಾರ್ವತಿ ವಿಜಯಕುಮಾರ ಸೋನಾರೆ, ಡಾ.ಚಂದ್ರಪ್ಪ ಭತಮುರ್ಗೆ, ಸಂಗಮೇಶ ಜ್ಯಾಂತೆ, ಚೆನ್ನಮ್ಮ, ಹಂಸಕವಿ ಹನುಮಂತಪ್ಪ ವಲ್ಲೇಪೂರೆ, ಶೈಲಜಾ ಹುಡಗೆ, ಜಯದೇವಿ ಯದಲಾಪೂರೆ, ವಿಜಯಲಕ್ಷ್ಮಿ ಕೌಟಗೆ, ರೂಪಾ ಪಾಟೀಲ ಅವರ ಮನೆಗಳಿಗೆ ತೆರಳಿ ಸಚಿವರು ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ, ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು.

ಗಾಯಕಿಯರಾದ ಭಾನುಪ್ರಿಯಾ ಗೌತಮ ಅರಳಿ, ರೇಖಾ ಅಪ್ಪಾರಾವ್ ಸೌದಿ, ಕಲಾವಿದರಾದ ರಾಣಿ ಸತ್ಯಮೂರ್ತಿ, ಉಷಾ ಪ್ರಭಾಕರ್, ಎಂ.ಎಸ್.ಮನೋಹರ, ಚಿತ್ರಕಲಾವಿದ ಸಿ.ಬಿ.ಸೋಮಶೆಟ್ಟಿ ಅವರ ಮನೆಗೂ ಭೇಟಿ ಸನ್ಮಾನಿಸಿದರು.

ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸಾಹಿತಿಗಳಾದ ಶಿವಕುಮಾರ ಕಟ್ಟೆ, ರಮೇಶ ಬಿರಾದಾರ, ಶಂಭುಲಿಂಗ ವಾಲದೊಡ್ಡಿ, ಟಿ.ಎಂ.ಮಚ್ಚೆ, ಸಿದ್ಧಾರೂಡ ಭಾಲ್ಕೆ, ದೇವೇಂದ್ರ ಕರಂಜೆ, ಶಿವಶಂಕರ ಟೋಕರೆ, ವಿಜಯಕುಮಾರ ಗೌರೆ, ಪ್ರೊ.ಜಗನ್ನಾಥ ಕಮಲಾಪೂರೆ, ಆನಂದ ಪಾಟೀಲ, ಅಶೋಕ ದಿಡಗೆ, ಗುರುಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.