ಕಮಲನಗರ: ‘ಪ್ರತಿಯೊಬ್ಬರೂ ಕುಡಿಯುವ ನೀರಿನ ಸಂರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆ ಜೀವನದ ಆದ್ಯ ಕರ್ತವ್ಯವಾಗಬೇಕು’ ಎಂದು ಸಂಪನ್ಮೂಲ ವ್ಯಕ್ತಿ ರಮೇಶ ಸನಾತನ ಹೇಳಿದರು.
ತಾಲ್ಲೂಕಿನ ಖತಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪರಿವರ್ತನಾ ಮಹಿಳಾ ಮಂಡಳ ಕುಟರನಟ್ಟಿ ಸಹಯೋಗದಲ್ಲಿ ಶುಕ್ರವಾರ ನಡೆದ ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಜಲ ಸಾಕ್ಷರತೆಯ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ,‘ಪಿತೃ ಋಣ, ಮಾತೃ ಋಣ, ದೇಶ ಹಾಗೂ ಮಣ್ಣಿನ ಋಣ ತೀರಿಸಬೇಕೆಂದರೆ ಕುಡಿಯುವ ನೀರಿನ ಸಂರಕ್ಷಣೆ ಮಾಡಬೇಕು. ಇಡೀ ಜಗತ್ತನ್ನು ನೀರಿನ ಸಮಸ್ಯೆ ಬಾಧಿಸುತ್ತಿದೆ. ಆದರೆ ನೀರನ್ನು ಮಿತವಾಗಿ, ಅವಶ್ಯಕತೆಗೆ ಅನುಗುಣವಾಗಿ ಬಳಸಿದರೆ ನೀರಿನ ಸಂರಕ್ಷಣೆ ಮಾಡಿದಂತಾಗುತ್ತದೆ. ದೇಶದ ಪಾರಂಪರಿಕ ವ್ಯವಸ್ಥೆಯಲ್ಲಿಯೇ ನೀರಿನ ಸಂರಕ್ಷಣೆಯ ಕುರಿತಾದ ಸಾಕಷ್ಟು ಜ್ಞಾನ ಅಡಗಿದೆ’ ಎಂದರು.
ಮುಖ್ಯಶಿಕ್ಷಕ ವಿಜಯಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.ನೋಡಲ್ ಅಧಿಕಾರಿ ರಾಜಕುಮಾರ ಪಾಟೀಲ, ಸಂಘಟಕ ಉಮಾಕಾಂತ ಬಿರಾದಾರ, ರಾಜಕುಮಾರ ಜೊನ್ನಿಕೇರೆ, ಸೂರ್ಯಕಾಂತ ಬಿರಾದಾರ, ಮಲ್ಲಮ್ಮ ಕಸ್ತೂರೆ, ಸಂಗೀತಾ ಬಿರಾದಾರ ಹಾಗೂ ರೇಖಾ ಮಂಠಾಳೆ ಇದ್ದರು.
ನೀರಿನ ಸಂರಕ್ಷಣೆ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯಲಕ್ಷ್ಮಿ, ದಯಾನಂದ ಹಾಗೂ ಪ್ರೀತಿ ಅವರಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.