
ಬಸವಕಲ್ಯಾಣ: ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಬೀದರ್ ತಾಲ್ಲೂಕಿನ ನಾಲ್ವರು ಮೃತಪಟ್ಟಿದ್ದು, ಗಾಯಗೊಂಡ ಇಬ್ಬರಿಗೆ ಉಮರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್ ತಾಲ್ಲೂಕಿನ ಕಾಶಂಪುರ (ಪಿ) ಗ್ರಾಮದ ಕಾರು ಚಾಲಕ ರತಿಕಾಂತ ಮಾರುತಿ ಬಸಗೊಂಡ (30), ಸದಾನಂದ ಮಾರುತಿ ಬಸಗೊಂಡ (19), ಶಿವಕುಮಾರ ಚಿದಾನಂದ ವಗ್ಗೆ (26) ಸಂತೋಷ ಬಜರಂಗ ಬಸಗೊಂಡ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುರುಮ್ ಠಾಣಾ ವ್ಯಾಪ್ತಿಯ ದಾಳಿಂಬ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಾಗಿದೆ. ಇದೇ ಕಾರಿನಲ್ಲಿದ್ದ ದಿಗಂಬರ ಸಂಗೋಳಗೆ ಹಾಗೂ ಇನ್ನೊಂದು ಕಾರಿನ ಚಾಲಕ ಸೊಲ್ಲಾಪುರದ ಲಾವಣ್ಯ ಮಸೋನಿ ಗಾಯ
ಗೊಂಡಿದ್ದಾರೆ.
ವಿಜಯಪುರ ಹತ್ತಿರದ ಪ್ರಸಿದ್ಧ ದೇವಸ್ಥಾನ ಹುಲಜಂತಿಯ ಮಾಳಿಂಗರಾಯನ ಜಾತ್ರೆಗೆ ಹೋಗಿ ಬರುವಾಗ ಬೆಳಿಗ್ಗೆ 6 ಗಂಟೆಗೆ ಅಪಘಾತ ಸಂಭವಿಸಿದೆ. ಉಮರ್ಗಾದಿಂದ ಸೊಲಾಪುರ ಕಡೆಗೆ ಹೋಗುತ್ತಿದ್ದ ಇನ್ನೊಂದು ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದು, ಒಳಗಿದ್ದವರನ್ನು ಜೆಸಿಬಿ ವಾಹನದ ಸಹಾಯದಿಂದ ಹೊರಗೆ ತೆಗೆಯಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸದಾಶಿವ ಸೇಲಾರ್, ಮುರುಮ್ ಠಾಣೆ ಅಧಿಕಾರಿಗಳಾದ ಸಂದೀಪ ದಹಿಫಳೆ ಮತ್ತಿತರರು ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.