ಬೀದರ್:‘ಗ್ರಾಮೀಣ ಸೊಗಡಿನ ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ನಿರಂತರವಾಗಿ ನಡೆಯಬೇಕು’ ಎಂದು ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಅಭಿಪ್ರಾಯಪಟ್ಟರು.
ಇಲ್ಲಿಯ ಸಾಹಿತ್ಯ ಸಂಘದ ಸಭಾಭವನದಲ್ಲಿ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ’ಗ್ರಾಮಲೋಕ’ ಜನಪದ ಗಾಯನ, ಸಂಸ್ಕೃತಿ, ಸಾಹಿತ್ಯ, ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಯಕದೊಂದಿಗೆ ಜನಪದ ಸಂಸ್ಕೃತಿ ಬೆಸೆದುಕೊಂಡಿದೆ. ಜಗನ್ನಾಥ ಹೆಬ್ಬಾಳೆ ಅವರು ಜನಪದ ಸಂಸ್ಕೃತಿಯ ಬಗೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
ಉಪನ್ಯಾಸಕ ಚಂದ್ರಪ್ಪ ಭತಮುರ್ಗೆ ಮಾತನಾಡಿ "ಗ್ರಾಮಲೋಕ ಕಾರ್ಯಕ್ರಮ ಹಳ್ಳಿಗಾಡಿನ ಮಹಿಳೆಯರ ಜನಪದ ಹಾಡುಗಳನ್ನು ಪರಿಚಯಿಸುವ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು.
ಡಾ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಜನಪದ ಹಾಡುಗಳಲ್ಲಿ ನೀತಿಯ ಪಾಠಗಳಿವೆ, ವ್ಯಕ್ತಿತ್ವ ವಿಕಸನದ ಮೌಲ್ಯಗಳಿವೆ. ಇಂದು ಪಾರಂಪರಿಕ ಧ್ಯೇಯೋದ್ದೇಶಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಮತ್ತೆ ಪುನಶ್ಚೇತನಗೊಳಿಸಬೇಕಾಗಿದೆ’ ಎಂದು ತಿಳಿಸಿದರು.
ಕಲಾವಿದರಾದ ರಾಜೇಂದ್ರಸಿಂಗ ಪವಾರ್, ರಘುನಾಥ ಪಂಚಾಳ, ಉಮಾಕಾಂತ ಮೀಸೆ, ಶಾಂಭವಿ ಕಲ್ಮಠ, ಪುಂಡಲಿಕರಾವ್ ಪಾಟೀಲ ಗುಮ್ಮಾ, ಮಾರುತಿ ಚಾಂಬೋಳ್, ಹಣಮು ಪಾಜಿ, ರವೀಂದ್ರ ಹೊಸಳ್ಳಿ, ವೀರಭದ್ರಪ್ಪ ಉಪ್ಪಿನ್, ಈಶ್ವರಿ ಐನೊಳ್ಳಿ, ವೀಣಾ ಚಿಮಕೋಡೆ, ದೇವಿದಾಸ್ ಚಿಮಕೋಡೆ ಅವರಿಗೆ ಧರಿನಾಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಅಶೋಕ ನಾಗೂರೆ, ಪ್ರೊ.ದೇವೇಂದ್ರ ಕಮಲ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಪ್ರಕಾಶ ಕನ್ನಾಳೆ ಇದ್ದರು. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಎಸ್.ಬಿ.ಕುಚಬಾಳ ನಿರೂಪಿಸಿದರು. ಬಸವರಾಜ ಹೆಗ್ಗೆ ವಂದಿಸಿದರು.
ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಲಾವಿದರು ಕೋಲಾಟ ಪ್ರದರ್ಶಿಸಿದರು. ಚಟ್ನಾಳ ಗ್ರಾಮದ ಕಲಾವಿದರ ಚಕ್ರಿ ಭಜನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.