
ಬೀದರ್ನಲ್ಲಿ ಏರ್ಪಡಿಸಿದ್ದ ಗಡಿ ಕನ್ನಡಿಗರ ಉತ್ಸವವನ್ನು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಿಶ್ವನಾಥ ಜಿ.ಪಿ. ಉದ್ಘಾಟಿಸಿದರು
ಬೀದರ್: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದಿಂದ ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ರಾಜ್ಯಮಟ್ಟದ ಗಡಿ ಕನ್ನಡಿಗರ ಉತ್ಸವ, 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಿಶ್ವನಾಥ ಜಿ.ಪಿ. ಉದ್ಘಾಟಿಸಿ, ಗಡಿಭಾಗದ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು. ಗಡಿ ಭಾಗದಲ್ಲಿ ಕನ್ನಡ ಕಟ್ಟುವ, ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ಕೆಲಸ ಶ್ಲಾಘನಾರ್ಹ. ಅವುಗಳನ್ನು ಸರ್ಕಾರ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನಾಡಿನ ಗಡಿಭಾಗದ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವುದು ನಿಲ್ಲಿಸಿದೆ. ಹೊರರಾಜ್ಯದ ಸಂಘ ಸಂಸ್ಥೆಗಳಿಗೆ ಐದರಿಂದ ಹತ್ತು ಲಕ್ಷದ ವರೆಗೆ ನೀಡಿದೆ. ಇದು ನಾಡಿನ ಗಡಿಭಾಗದ ಸಂಘ ಸಂಸ್ಥೆಗಳಿಗೆ ಮಾಡುತ್ತಿರುವ ಅಪಮಾನವಾಗಿದೆ. ಇದನ್ನು ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಅಧ್ಯಕ್ಷತೆ ವಹಿಸಿದ್ದರು. ಅನ್ಸೂಲ್ ವಾಲಿ, ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಉಮೇಶಕುಮಾರ ಸೋರಳ್ಳಿಕರ್, ಕರವೇ ರಾಜ್ಯಾಧ್ಯಕ್ಷ ಶಂಕರಗೌಡ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ಚಂದು ಹಾವೇರಿ ಮನುಕುಮಾರ, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ವೀರ ಕನ್ನಡಿಗರ ಸೇನೆ ರಾಜ್ಯ ಉಪಾಧ್ಯಕ್ಷ ರವಿ ವಂಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ಎಸ್. ಮನೋಹರ ಮತ್ತಿತರರು ಪಾಲ್ಗೊಂಡಿದ್ದರು.
ದಿಯಾನ್ ನಾದವೇದಿಕೆ ಸಂಗೀತ ಫೌಂಡೇಶನ್ ತಂಡ ನಾಡಗೀತೆ ಹಾಡಿತು. ಮಂಡ್ಯದ ಕುಮಾರಿ ಮಧುಶ್ರೀ ತಂಡ ನೃತ್ಯ ಪ್ರದರ್ಶಿಸಿತು. ಸಂಗೀತ ಶಿಕ್ಷಕ ಜಗನ್ನಾಥ ಬೇಂದ್ರೆ ಪ್ರಾರ್ಥನೆ ಗೀತೆ, ಶಿವರಾಜ ತಡಪಳ್ಳಿ ಕ್ರಾಂತಿ ಗೀತೆ ಹಾಡಿದರು. 70 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುನೀತಾ ಬಿಕ್ಲೆ ನಿರೂಪಿಸಿದರು. ಕುಪೇಂದ್ರ ಹೊಸಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.