ಬೀದರ್: ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಮ್ಮ ಮನೆಯಲ್ಲೇ ₹ 15 ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಬೀದರ್ನ ಗ್ರೇಡ್–1 ತಹಶೀಲ್ದಾರ್ ಗಂಗಾದೇವಿ ಅವರಿಗೆ ಇಲ್ಲಿಯ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.
ರಾಜ್ಯದಲ್ಲೇ ಅಧಿಕಾರಿಯೊಬ್ಬರು ಅತಿ ಹೆಚ್ಚು ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪ್ರಕರಣ ಇದಾಗಿದೆ. ಭ್ರಷ್ಟಾಚಾರ ರಾಷ್ಟ್ರೀಯ ಕ್ಯಾನ್ಸರ್ ಇದ್ದಂತೆ. ಇಂಥವರಿಗೆ ಜಾಮೀನು ಕೂಡುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಡಲೂರ ಸತ್ಯನಾರಾಯಣ ಆಚಾರ್ಯ ಜಾಮೀನು ನಿರಾಕರಿಸಿದರು.
ಗಂಗಾದೇವಿ ಅವರು ಜುಲೈ 28ರಂದು ಜಮೀನು ಮ್ಯುಟೇಷನ್ ಮಾಡಿಕೊಡಲು ವಿದ್ಯಾನಗರ ಕಾಲೊನಿಯ ಹಾರ್ಡ್ವೇರ್ ಅಂಗಡಿ ಮಾಲೀಕ ಲೀಲಾಧರ ಪಟೇಲ್ ಅವರಿಂದ ₹ 15 ಲಕ್ಷ ಪಡೆಯುತ್ತಿದ್ದಾಗ ಎಸಿಬಿ ಬೀದರ್ ಡಿವೈಎಸ್ಪಿ ಹಣಮಂತರಾಯ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದರು.
ನ್ಯಾಯಾಲಯ ಆಗಸ್ಟ್ 5 ರಂದು ಪ್ರಕರಣದ ಜಾಮೀನ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ತೀರ್ಪು ಕಾಯ್ದಿರಿಸಿತ್ತು. ಶನಿವಾರ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದೆ. ಎಸಿಬಿ ವಿಶೇಷ ಸಾರ್ವಜನಿಕ ಅಭಿಯೋಜಕ ಕೇಶವ ಶ್ರೀಮಾಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.