ADVERTISEMENT

ಬೀದರ್‌: ಗಂಗಾದೇವಿಗೆ ಜಾಮೀನು ನಿರಾಕರಣೆ

ತಹಶೀಲ್ದಾರ್ ₹ 15 ಲಕ್ಷ ಲಂಚ ಪಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 16:06 IST
Last Updated 7 ಆಗಸ್ಟ್ 2021, 16:06 IST
ತಹಶೀಲ್ದಾರ್ ಗಂಗಾದೇವಿ
ತಹಶೀಲ್ದಾರ್ ಗಂಗಾದೇವಿ   

ಬೀದರ್‌: ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಮ್ಮ ಮನೆಯಲ್ಲೇ ₹ 15 ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಬೀದರ್‌ನ ಗ್ರೇಡ್‌–1 ತಹಶೀಲ್ದಾರ್ ಗಂಗಾದೇವಿ ಅವರಿಗೆ ಇಲ್ಲಿಯ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.

ರಾಜ್ಯದಲ್ಲೇ ಅಧಿಕಾರಿಯೊಬ್ಬರು ಅತಿ ಹೆಚ್ಚು ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪ್ರಕರಣ ಇದಾಗಿದೆ. ಭ್ರಷ್ಟಾಚಾರ ರಾಷ್ಟ್ರೀಯ ಕ್ಯಾನ್ಸರ್‌ ಇದ್ದಂತೆ. ಇಂಥವರಿಗೆ ಜಾಮೀನು ಕೂಡುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಕಾಡಲೂರ ಸತ್ಯನಾರಾಯಣ ಆಚಾರ್ಯ ಜಾಮೀನು ನಿರಾಕರಿಸಿದರು.

ಗಂಗಾದೇವಿ ಅವರು ಜುಲೈ 28ರಂದು ಜಮೀನು ಮ್ಯುಟೇಷನ್ ಮಾಡಿಕೊಡಲು ವಿದ್ಯಾನಗರ ಕಾಲೊನಿಯ ಹಾರ್ಡ್‌ವೇರ್‌ ಅಂಗಡಿ ಮಾಲೀಕ ಲೀಲಾಧರ ಪಟೇಲ್‌ ಅವರಿಂದ ₹ 15 ಲಕ್ಷ ಪಡೆಯುತ್ತಿದ್ದಾಗ ಎಸಿಬಿ ಬೀದರ್ ಡಿವೈಎಸ್‌ಪಿ ಹಣಮಂತರಾಯ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದರು.

ADVERTISEMENT

ನ್ಯಾಯಾಲಯ ಆಗಸ್ಟ್ 5 ರಂದು ಪ್ರಕರಣದ ಜಾಮೀನ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ತೀರ್ಪು ಕಾಯ್ದಿರಿಸಿತ್ತು. ಶನಿವಾರ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದೆ. ಎಸಿಬಿ ವಿಶೇಷ ಸಾರ್ವಜನಿಕ ಅಭಿಯೋಜಕ ಕೇಶವ ಶ್ರೀಮಾಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.