ಬೀದರ್: ‘ದಿವಂಗತ ಎಂ.ಜಿ. ಗಂಗನಪಳ್ಳಿ ಅವರು ಆಶು ಕವಿಗಳಾಗಿ ಸಾನೆಟ್ ಮಾದರಿಯಲ್ಲಿ ಕಾವ್ಯ ರಚಿಸಿ, ನಾಡಿನ ಕನ್ನಡ ಭಾಷೆಯ ಅಂತಃಸತ್ವದ ಕವಿಯಾಗಿದ್ದರು’ ಎಂದು ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ ತಿಳಿಸಿದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಗಂಗನಪಳ್ಳಿ ಪರಿವಾರದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಆಶುಕವಿ ದಿವಂಗತ ಎಂ.ಜಿ ಗಂಗನಪಳ್ಳಿ ಮತ್ತು ಸಾಹಿತಿ ದಿವಂಗತ ರಾಮರಾವ್ ಗಂಗನಪಳ್ಳಿ ಇವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ-ಉಪನ್ಯಾಸ-ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂ.ಜಿ. ಗಂಗನಪಳ್ಳಿ ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದರು. ಇವರ ಸಹೋದರ ದಿವಂಗತ ರಾಮರಾವ್ ಗಂಗನಪಳ್ಳಿಯವರು ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಆಧ್ಯಾತ್ಮದ ಒಲವುಳ್ಳವರಾಗಿ ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಂಗನಪಳ್ಳಿ ಸಹೋದರರ ಕೊಡುಗೆ ಮಹತ್ವದ್ದು ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಮಾತನಾಡಿ, ಗಂಗನಪಳ್ಳಿ ಸಹೋದರರು ರಚಿಸಿರುವ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಅವರ ಪರಿವಾರದವರ ಸಹಯೋಗದಲ್ಲಿ ಆಯೋಜಿಸಲಾಗುವುದು. ಈ ಮೂಲಕ ಇವರ ಸೇವೆ, ಸಾಧನೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದರು.
ಸಾಹಿತಿ ಸುನೀತಾ ಕೂಡ್ಲಿಕರ್, ಎಂ.ಜಿ ಗಂಗನಪಳ್ಳಿ ಅವರು ನಾಡು ನುಡಿ, ಭಾಷೆ, ಪರಿಸರ, ಸಂತ ಮಹಾತ್ಮರ ಕುರಿತಾದ ಸುಮಾರು 54 ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಒಟ್ಟಾರೆ ಸಾಹಿತ್ಯ ಕೃತಿಗಳ ಸಮಗ್ರ ಅವಲೋಕನ ಪುಸ್ತಕವಾಗಿ ಸಂಜೀವಕುಮಾರ ಅತಿವಾಳೆ ಸಂಪಾದಿಸಿರುವ ‘ಭಾವಗಂಗೆ’ಯಲ್ಲಿ ಪ್ರಕಟವಾಗಿದೆ ಎಂದು ವಿವರಿಸಿದರು.
ಸಾಹಿತಿ ದೇವಿದಾಸ ಜೋಶಿ, ಸಾಹಿತಿ ಎಂ.ಜಿ ದೇಶಪಾಂಡೆ, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ , ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಇದ್ದರು. ಜಾಲಿಂದರ ಗಂಗನಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ರೇಣುಕಾ ಎನ್.ಬಿ. ಹಾಡಿದರು. ಗಂಗನಪಳ್ಳಿ ಅವರ ಕುರಿತಾಗಿ ಕವಿಗಳಾದ ಎಸ್.ಎಸ್ ಹೊಡಮನಿ, ರಾಮಚಂದ್ರ ಗಣಾಪುರ, ಸುಬ್ಬಣ್ಣ ಕರಕನಳ್ಳಿ, ಕೀರ್ತಿಲತಾ ಹೊಸಾಳೆ, ಎಂ ಮಕ್ತುಂಬಿ, ಧನಲಕ್ಷ್ಮಿ ಪಾಟೀಲ್ ಹಲಸಿ, ಮುರಳಿನಾಥ ಮೇತ್ರೆ, ನರಸಪ್ಪ ಗೌನಳ್ಳಿ, ಆತ್ಮಾನಂದ ಬಂಬುಳಗೆ, ಮಾಯಾದೇವಿ ಗೋಖಲೆ, ಸಿದ್ದಮ್ಮ ಬಸಣ್ಣೂರ್, ಸಂಗೀತಾ ಕಾಂಬಳೆ, ಪ್ರಿಯಾಂಕಾ ಜಾಧವ್ ಅವರು ಸ್ವರಚಿತ ಕವನ ವಾಚನ ಮಾಡಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು, ಕುಪೇಂದ್ರ ಹೊಸಮನಿ ವಂದಿಸಿದರು.
ಗವಿಸಿದ್ದಪ್ಪ ಸಂಗಪ್ಪ ಅವರಿಗೆ ಪ್ರಶಸ್ತಿ:
ಎಂ.ಜಿ ಗಂಗನಪಳ್ಳಿ ಕಾವ್ಯ ಪ್ರಶಸ್ತಿಯನ್ನು ಕಲಬುರಗಿಯ ಹಿರಿಯ ಸಾಹಿತಿ ಗವಿಸಿದ್ದಪ್ಪ ಪಾಟೀಲ್ ಅವರಿಗೆ ಪ್ರದಾನ ಮಾಡಲಾಯಿತು. ₹11 ಸಾವಿರ ನಗದು ಸ್ಮರಣಿಕೆ ನೀಡಲಾಯಿತು. ರಾಮರಾವ್ ಗಂಗನಪಳ್ಳಿ ಉದಯೋನ್ಮುಖ ಬರಹಗಾರ ಪ್ರಶಸ್ತಿಯನ್ನು ಮೀನಕೇರಾ ಗ್ರಾಮದ ಯುವ ಬರಹಗಾರ ಸಂಗಪ್ಪ ತೌಡಿ ಅವರಿಗೆ ನೀಡಲಾಯಿತು. ₹5 ಸಾವಿರ ನಗದು ಸ್ಮರಣಿಕೆ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.