ಬಸವಕಲ್ಯಾಣ: ‘ಬುಡಕಟ್ಟು ಸಮುದಾಯಕ್ಕೆ ಸರ್ಕಾರದ ವಿವಿಧ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿಯವರು ಹಾಗೂ ವಿವಿಧ ಇಲಾಖೆಯವರು ಪ್ರಯತ್ನಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಫಿ ಸಲಹೆ ನೀಡಿದ್ದಾರೆ.
ತಾಲ್ಲೂಕಿನ ಪ್ರತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಾಪುರ (ಕೆ) ವಾಡಿಯಲ್ಲಿ ಗುರುವಾರ ನಡೆದ ಬುಡಕಟ್ಟು ಸಮುದಾಯದ ಸೌಲಭ್ಯಗಳ ಅರಿವು ಮೂಡಿಸುವ ‘ಗ್ರಾಮ ಉತ್ಕರ್ಷ ಅಭಿಯಾನ’ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ರಸ್ತೆ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ದೂರವಾಣಿ ಸಂಪರ್ಕ, ವಿದ್ಯುಚ್ಛಕ್ತಿ ಮತ್ತು ಮನೆಗಳನ್ನು ಒದಗಿಸಿ ಕೊಡುವುದೇ ಅಭಿಯಾನದ ಉದ್ದೇಶವಾಗಿದೆ. ಮಿರ್ಜಾಪುರ, ಗೊಗ್ಗಾ, ಕೌಡಿಯಾಳ, ಖೇರ್ಡಾ ಗ್ರಾಮಗಳಲ್ಲಿಯೂ ಅಭಿಯಾನ ನಡೆಯಲಿದೆ’ ಎಂದರು.
ತಾಲ್ಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಮೋನಮ್ಮ ಮಾತನಾಡಿ, ‘ಇಲಾಖೆಗಳ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ದೂರು ನೀಡಿ ನ್ಯಾಯ ಪಡೆಯಬಹುದಾಗಿದೆ’ ಎಂದರು.
ಪಿಡಿಒ ಚಂದ್ರಾಮ ಧೂಳಖೇಡ, ‘ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾಗಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.