ಬೀದರ್: ‘ಇಂದಿನ ಮಕ್ಕಳಲ್ಲಿ ಬುದ್ಧಿಶಕ್ತಿಯ ಕೊರತೆಯಿಲ್ಲ. ಆದರೆ, ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕಅನ್ನಪೂರ್ಣ ಹೇಳಿದರು.
ನಗರದ ಚಿಟ್ಟಾ ರಸ್ತೆಯಲ್ಲಿರುವ ನಿಸರ್ಗ ಹೆಲ್ತ್ ಎಜುಕೇಶನ್ ಮತ್ತು ಚಾರಿಟಬಲ್ ಸಂಸ್ಥೆಯ ಲಂಡನ್ ಕಿಡ್ಸ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮನುಷ್ಯ ಶೈಕ್ಷಣಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಯಾಗಿರುತ್ತಾನೆ’ ಎಂದು ನುಡಿದರು.
‘ಪ್ರೌಢಶಾಲಾ ಹಂತದವರೆಗೂ ಪಾಲಕರು ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು’ ಎಂದು ಕಿವಿ ಮಾತು ಹೇಳಿದರು.
ಮಕ್ಕಳ ತಜ್ಞ ಡಾ.ಸಿ.ಆನಂದರಾವ್ ಮಾತನಾಡಿ,‘ಮಾತೃ ಭಾಷೆ ಹಾಗೂ ಪ್ರಾಂತಿಯ ಭಾಷೆ ಬಗ್ಗೆ ತಿಳಿವಳಿಕೆ ನೀಡಬೇಕು. ಮಕ್ಕಳನ್ನು ಆರೋಗ್ಯವಂತರನ್ನಾಗಿ ಬೆಳೆಸಬೇಕು’ ಎಂದು ತಿಳಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಶರಣಬಸಪ್ಪ ಭಜಂತ್ರಿ ಮಾತನಾಡಿ, ‘ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ ಸದೃಢವಾದಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಡಿ.ಮೋಸಿನ್ ಪಟೇಲ್, ಶಿವಪುತ್ರಪ್ಪ ಕೋಲಿ ಕುಮಟೆ ಮಾತನಾಡಿದರು. ಬಸವಣಪ್ಪ ನೇಳಗೆ ಅಧ್ಯಕ್ಷತೆ ವಹಿಸಿದ್ದರು. ದಾಕ್ಷಾಯಿಣಿ ನೇಳಗೆ, ವಿನಯ ಕುಲಕರ್ಣಿ, ಆರತಿ, ಜ್ಯೋತಿ, ಶಿವರಾಜ ನೇಳಗೆ, ವೀರಭದ್ರಪ್ಪ ನೇಳಗೆ, ಮಹಾರುದ್ರ ನೇಳಗೆ, ವೀರಭದ್ರಪ್ಪ ಉಪ್ಪಿನ್, ಶಾಮ ಹಲಮಡಗೆ, ಸದಾನಂದ ಪಾಟೀಲ, ಶ್ರೀನಿವಾಸ ಕೋರಿ, ವಿಜಯಕುಮಾರ ಚಾಮಾ, ಶಶಿ ಹೊಸಳ್ಳಿ, ಶೇಖ್ ಇಬ್ರಾಹಿಂ, ವಿಜಯಕುಮಾರ ಸಿದ್ರಾಮಶೆಟ್ಟಿ ಇದ್ದರು. ಅರವಿಂದ ಕುಲಕರ್ಣಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.