ಕಮಲನಗರ: ಬೆಳೆವಿಮೆ ಕುರಿತ ಪ್ರಚಾರಕ್ಕೆ ತೋರುವ ಆಸಕ್ತಿಯನ್ನು ಪರಿಹಾರ ವಿತರಣೆಯಲ್ಲೂ ತೋರಬೇಕು ಎಂದು ಒತ್ತಾಯಿಸಿ ವ್ಯವಸ್ಥೆ ಪರಿವರ್ತನ ವೇದಿಕೆ ಅಧ್ಯಕ್ಷ ವೈಜನಾಥ ವಡ್ಡೆ ನೇತೃತ್ವದಲ್ಲಿ ಗ್ರೇಡ್-2 ತಹಶೀಲ್ದಾರ್ ಪ್ರಭಾಕರ ಅವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ವೈಜನಾಥ ವಡ್ಡೆ,‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ತಾಲ್ಲೂಕಿನಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ರೈತರು ನೋಂದಾಯಿಸಿದ್ದರೂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೋಂದಾಯಿಸಿಕೊಳ್ಳುವಾಗ ತೋರಿದ ಆಸಕ್ತಿ ವಿಮೆ ಪರಿಹಾರ ನೀಡುವಲ್ಲಿ ತೋರುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ನಷ್ಟವಾದಾಗ ಇಲಾಖೆ ಅನುಸರಿಸುವ ಸಮೀಕ್ಷಾ ವಿಧಾನದ ಕುರಿತು ಬಹುತೇಕ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಷ್ಟದ ಅಂದಾಜು ಮಾಡುವಾಗ ಹೋಬಳಿ ವ್ಯಾಪ್ತಿಯನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಗುವುದಿಲ್ಲ. ಸಕಾಲಕ್ಕೆ ವೈಜ್ಞಾನಿಕ ಬೆಂಬಲ ಬೆಲೆಯೂ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಬೆಳೆ ವಿಮೆ ಪರಿಹಾರ ನೀಡುವಲ್ಲಿ ಆಸಕ್ತಿ ತೋರಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ್ ಮುಧಾಳೆ, ಶುಭಂ, ಪ್ರಶಾಂತ ಖಾನಾಪುರೆ ಸೇರಿದಂತೆ ವ್ಯವಸ್ಥೆ ಪರಿವರ್ತನ ವೇದಿಕೆ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.