ಬೀದರ್: ‘ಇಂಗ್ಲಿಷ್ನ ಅತಿಯಾದ ಬಳಕೆಯಿಂದ ಮಾತೃಭಾಷೆ ಮಹತ್ವ ಕಳೆದುಕೊಳ್ಳುತ್ತಿದೆ. ಆದ್ದರಿಂದ ಮಾತೃಭಾಷೆಗೂ ಪ್ರಾಮುಖ್ಯ ನೀಡುವ ಅಗತ್ಯ ಇದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ರವೀಂದ್ರನಾಥ ಗಬಾಡಿ ಹೇಳಿದರು.
ನಗರದ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ವಿದ್ಯಾರ್ಥಿಗಳಿಗಾಗಿ ‘ಶಬ್ದಮಣಿದರ್ಪಣಂ’ ಕುರಿತು ಗುರುವಾರ ಆಯೋಜಿಸಿದ್ದ ಅಂತರ್ ಮಹಾವಿದ್ಯಾಲಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬರವಣಿಗೆಯಿಂದ ಭಾಷೆ ಸುಧಾರಿಸುತ್ತದೆ. ಶಬ್ದಕೋಶದ ಬಳಕೆಯಿಂದ ಭಾಷೆಯನ್ನು ಇನ್ನಷ್ಟು ಹದಗೊಳಿಸಲು ಸಾಧ್ಯವಾಗುತ್ತದೆ. ಬೋಧನೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಕಲಬುರ್ಗಿಯ ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಕಲ್ಯಾಣರಾವ್ ಪಾಟೀಲ ಮಾತನಾಡಿ, ‘ಶಿಕ್ಷಣವು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪರಿಶುದ್ಧವಾದ ಭಾಷೆ ಹಾಗೂ ಶಬ್ದಗಳ ಸಂಕಲನಕ್ಕೆ ಉತ್ತಮ ಶಿಕ್ಷಣದ ಅಗತ್ಯ ಇದೆ’ ಎಂದು ವಿವರಿಸಿದರು.
ಬೀದರ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ಪಂಚಾಳ, ಪ್ರಾಚಾರ್ಯ ಎಸ್.ಕೆ. ಸಾತನೂರ ಮಾತನಾಡಿದರು.
ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಸ್ವಾಗತಿಸಿದರು. ಪ್ರೊ.ಶೈಲಜಾ ನಿರೂಪಿಸಿದರು. ಪ್ರೊ.ವಾಮನರಾವ್ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.