ADVERTISEMENT

ಸಮಾಜಕ್ಕೆ ವಚನ ಪರಿಚಯಿಸಿದ ಹಳಕಟ್ಟಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 14:18 IST
Last Updated 4 ಜುಲೈ 2021, 14:18 IST
ಬೀದರ್‌ನ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯಸ್ವಾಮಿ ಹಿರೇಮಠ ಮಾತನಾಡಿದರು
ಬೀದರ್‌ನ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯಸ್ವಾಮಿ ಹಿರೇಮಠ ಮಾತನಾಡಿದರು   

ಬೀದರ್: ‘ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯಸ್ವಾಮಿ ಹಿರೇಮಠ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಮೊದಲು 50 ವಚನಕಾರರನ್ನು ಮಾತ್ರ ಗುರುತಿಸಲಾಗಿತ್ತು. ಹಳಕಟ್ಟಿ ಅವರ ಸಂಶೋಧನೆಯ ಫಲವಾಗಿ 250ಕ್ಕೂ ವಚನಕಾರರನ್ನು ಬೆಳಕಿಗೆ ತರಲು ಸಾಧ್ಯವಾಯಿತು‘ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ‘ಕನ್ನಡ ಪುರೋಹಿತ ಆಲೂರು ವೆಂಕಟರಾಯರ ಸಹಪಾಠಿಗಳಾಗಿದ್ದ ಹಳಕಟ್ಟಿ ಅವರು ಮುಂಬೈಯಲ್ಲಿ ಓದುತ್ತಿರುವಾಗ ಗುಜರಾತಿ ಮತ್ತು ಮರಾಠಿ ಜನ ಭಾಷಾಭಿಮಾನ ಮತ್ತು ಕನ್ನಡದವರ ನಿರಾಭಿಮಾನ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು’ ಎಂದರು.

‘ಕನ್ನಡಿಗರು ಎಚ್ಚೆತ್ತು ಕೊಳ್ಳದಿದ್ದರೆ ಕನ್ನಡ ಉದ್ಧಾರ ಆಗದು ಎಂದು ಮನಗಂಡು ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ ಸಂಸ್ಕೃತಿಗಾಗಿ ದುಡಿದರು. ವಚನ ಸಾಹಿತ್ಯದ ಪ್ರಚಾರ ಪ್ರಸಾರ ಹಾಗೂ ಪ್ರಕಟಣೆಗೆ ತಮ್ಮ ಆಸ್ತಿಯನ್ನೇ ಮಾರಿದ್ದರು’ ಎಂದು ತಿಳಿಸಿದರು.

ನಗರಸಭೆ ಮಾಜಿ ಸದಸ್ಯೆ ಶಕುಂತಲಾ ಮಲ್ಕಪ್ಪ, ಶಿಕ್ಷಕ ಶರಣಯ್ಯ ಸ್ವಾಮಿ ಇದ್ದರು. ವಿಜಯಕುಮಾರ ಗೌರೆ ಸ್ವಾಗತಿಸಿದರು. ಸಿದ್ದಾರೂಢ ಭಾಲ್ಕೆ ನಿರೂಪಿಸಿದರು. ಸೂರ್ಯಕಾಂತ ಕೋಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.