ADVERTISEMENT

ಒಂದೇ ಮಳೆಗೆ ಉಕ್ಕಿ ಹರಿದ ಗಟಾರು, ಉರುಳಿದ ಮರ

ಮೂರು ದಿನ ಸಂಜೆ ಭಾರಿ ಮಳೆ ಸುರಿಯುವ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:45 IST
Last Updated 20 ಜುಲೈ 2019, 19:45 IST
ಬೀದರ್‌ನ ನಯಿಕಮಾನ್‌ದಿಂದ ಚೌಬಾರಾಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗಟಾರಗಳು ಉಕ್ಕಿ ಹರಿದ ನೀರಿನಲ್ಲೇ ಸಾಗಿದ ವಾಹನಗಳು
ಬೀದರ್‌ನ ನಯಿಕಮಾನ್‌ದಿಂದ ಚೌಬಾರಾಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗಟಾರಗಳು ಉಕ್ಕಿ ಹರಿದ ನೀರಿನಲ್ಲೇ ಸಾಗಿದ ವಾಹನಗಳು   

ಬೀದರ್: ಬೀದರ್‌ ಹೋಬಳಿಯಲ್ಲಿ 12 ಗಂಟೆಗಳ ಅವಧಿಯಲ್ಲಿ 71 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಶನಿವಾರ ಬೆಳಗಿನ ಜಾವ 1 ಗಂಟೆಗೆ ಆರಂಭವಾದ ಮಳೆ ಬೆಳಿಗ್ಗೆ 7 ಗಂಟೆಯ ವರೆಗೂ ಸುರಿದಿದೆ. ರಾತ್ರಿ ಎರಡು ತಾಸು ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಓಲ್ಡ್‌ಸಿಟಿಯಲ್ಲಿ ಗಟಾರುಗಳು ಉಕ್ಕಿ ಹರಿದವು. ಬೆಳಿಗ್ಗೆ 8 ಗಂಟೆಯ ವರೆಗೂ ರಸ್ತೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಭಾರಿ ಮಳೆಗೆ ಬ್ರಿಮ್ಸ್ ಆಸ್ಪತ್ರೆಯ ಬಳಿ ಬೇವಿನ ಮರವೊಂದು ರಸ್ತೆಯ ಮೇಲೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟು ಮಾಡಿತು. ನಯಿಕಮಾನ್‌ದಿಂದ ಚೌಬಾರಾಕ್ಕೆ ಹೋಗುವ ರಸ್ತೆಯಲ್ಲಿ ಶನಿವಾರ ನಸುಕಿನ ಜಾವ ಸುರಿದ ಭಾರಿ ಮಳೆಯಿಂದಾಗಿ ನೀರು ರಸ್ತೆ ಮೇಲೆ ಹಳ್ಳದಂತೆ ಹರಿಯಿತು. ಅಂಗಡಿಗಳ ಮಾಲೀಕರು ಬಹಳ ಹೊತ್ತಿನ ವರೆಗೂ ಅಂಗಡಿಗಳನ್ನು ತೆರೆದಿರಲಿಲ್ಲ. ನೀರು ಗಟಾರಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡುತ್ತಿದ್ದರು. ಬೀದಿ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಯಿತು.

ಚೌಬಾರಾ ಬಳಿ ನಗರಸಭೆ ರಸ್ತೆ ಬದಿಗೆ ಜೆಸಿಬಿಯಿಂದ ಅಗೆದು ಬಿಟ್ಟಿದೆ. ಕೊಳಚೆ ನೀರಿನಲ್ಲಿ ಮಳೆ ನೀರು ಸೇರಿಕೊಂಡು ಇನ್ನಷ್ಟು ಸಮಸ್ಯೆ ಆಯಿತು. ಜನ ಮನೆಗಳಿಂದ ಹೊರಗೆ ಬರುವುದು ಕಷ್ಟವಾಯಿತು. ಸಿಎಂಸಿ ಕಾಲೊನಿ ಹಾಗೂ ಲುಂಬಿಣಿನಗರದಲ್ಲಿ ಗಟಾರು ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದು ಕೆಸರುಮಯವಾಯಿತು. ಜನ ನಗರಸಭೆಯ ಅಧಿಕಾರಿಗಳಿಗೆ ಶಾಪ ಹಾಕುತ್ತ ಮನೆಯಿಂದ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದರು.

ADVERTISEMENT

ಡಾ.ಅಂಬೇಡ್ಕರ್‌ ವೃತ್ತ ಸಮೀಪ ಸಿದ್ಧಿ ವಿನಾಯಕ ಹೋಟೆಲ್, ತಾಲ್ಲೂಕು ಪಂಚಾಯಿತಿ ಮುಂಭಾಗದ ಎಸ್‌ಬಿಐ ಎದುರು, ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಪ್ರತಾಪನಗರದ ಲಾಹೋಟಿ ಕಾರ್‌ ಶೋರೂಂ ಸಮೀಪದ ಮೈದಾನದಲ್ಲಿರುವ ಗುಡಿಸಲುಗಳಿಗೆ ರಾತ್ರಿ ಮಳೆ ನೀರು ನುಗ್ಗಿ ಆತಂಕ ಸೃಷ್ಟಿಸಿತು. ಗುಡಿಸಲು ನಿವಾಸಿಗಳು ಮಧ್ಯರಾತ್ರಿ ತಮ್ಮ ಪಾತ್ರೆಪಗಡೆಗಳೊಂದಿಗೆ ದೊಡ್ಡ ಕಟ್ಟಡದ ಮುಂಭಾಗದಲ್ಲಿ ಆಶ್ರಯ ಪಡೆಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.