ಬೀದರ್: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.
ಸಂಜೆ 4.30ರ ಸುಮಾರಿಗೆ ಆರಂಭಗೊಂಡ ಜೋರು ಮಳೆ ಸಂಜೆ ಆರು ಗಂಟೆಯವರೆಗೆ ಎಡೆಬಿಡದೇ ಸುರಿಯಿತು. ಬಿರುಸಿನ ಮಳೆಗೆ ನಗರದ ಪ್ರಮುಖ ಮಾರ್ಗಗಳಲ್ಲಿ ನೀರು ಸಂಗ್ರಹಗೊಂಡು ವಾಹನಗಳ ಸಂಚಾರ ನಿಧಾನಗೊಂಡಿತು. ತಾಲ್ಲೂಕಿನ ಜನವಾಡ, ಮರಕಲ್, ಅಲಿಯಂಬರ್, ಅಷ್ಟೂರ್, ಚಿಟ್ಟಾ, ಅಮಲಾಪುರ, ಘೋಡಂಪಳ್ಳಿ, ಶಹಾಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಔರಾದ್ ತಾಲ್ಲೂಕಿನಲ್ಲಿ ಅರ್ಧಗಂಟೆ ಉತ್ತಮ ಮಳೆಯಾಗಿದೆ. ಹುಲಸೂರಿನಲ್ಲಿ ಕೆಲಸಮಯ ವರ್ಷಧಾರೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯ ಸುಳಿವು ಇರಲಿಲ್ಲ. ಎರಡ್ಮೂರು ದಿನಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿ ಸೆಕೆ ಜಾಸ್ತಿಯಾಗಿತ್ತು. ಗುರುವಾರ ಸುರಿದ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ.
ಈ ವಾರದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹೆಸರು ಬೆಳೆ ರಾಶಿಗೆ ರೈತರು ಸಿದ್ಧತೆ ನಡೆಸಿದ್ದರು. ಗುರುವಾರ ಸುರಿದ ಮಳೆ ಅವರ ಚಿಂತೆ ಹೆಚ್ಚಿಸಿದೆ. ಸದ್ಯ ಮಳೆಯಾಗದಿರಲೆಂದು ಪ್ರಾರ್ಥಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.