ಹುಮನಾಬಾದ್: ರಾಜ್ಯದ ಎಲ್ಲ ವಲಸೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಯೋಜಿತ ಸಂಘಟನೆಯ ತಾಲ್ಲೂಕು ಘಟಕದಿಂದ ಗುರುವಾರ ಉಪ ತಹಶೀಲ್ದಾರ್ ಕರೀಂ ಸಾಬ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸಾಮೋದ್ದೀನ್ ಮಾತನಾಡಿ, ಕೂಲಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ₹7,500 ಅನ್ನು ಕನಿಷ್ಠ 3 ತಿಂಗಳು ನೀಡಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಕ್ಕೆ ₹600 ನೀಡಬೇಕು. ಅಲ್ಲದೆ, ಹೆಚ್ಚುವರಿಯಾಗಿ ₹10 ಸಾವಿರ ಅನುದಾನ ಕೂಡಬೇಕು. ಪ್ರತಿ ಕೂಲಿಕಾರ್ಮಿಕರ ಕುಟುಂಬಕ್ಕೆ ಮುಂದಿನ ಆರು ತಿಂಗಳವರೆಗೆ ತಲಾ 10 ಕೆ.ಜಿ, ಅಕ್ಕಿ, ಗೋಧಿ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಪಡಿತರ ಚೀಟಿ ಮತ್ತು ಯಾವುದೇ ಷರತ್ತು ಇಲ್ಲದೆ ವಿತರಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಕೋಶಾಧ್ಯಕ್ಷೆ ಅಂಬುಬಾಯಿ ಮಾಳಗೆ ಮಾತನಾಡಿ, ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ ಸರ್ಕಾರದ ಆದೇಶದಂತೆ ಮೇ 30ರ ವರೆಗೆ ವೇತನ ಪಾವತಿಸಿ, ಎಲ್ಲಾ ವಸತಿ ನಿಲಯದ ನೌಕರರ ವೇತವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಾಳಗೆ, ಲಖನ್ ಕಂಟೆಪ್ಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.