ಬಸವಕಲ್ಯಾಣ: ‘ರೆಡ್ಡಿ ಸಮುದಾಯದ 28 ರಾಜಮನೆತನಗಳು ಆಳ್ವಿಕೆ ನಡೆಸಿದ್ದರೂ ಇತಿಹಾಸ ಮರೆಮಾಚಿ ಅಪಚಾರ ಎಸಗಲಾಗಿದೆ’ ಎಂದು ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗೆಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬಂದವರ ಓಣಿ ಹತ್ತಿರದ ಉದ್ಯಾನದಲ್ಲಿ ತಾಲ್ಲೂಕು ರೆಡ್ಡಿ ಸಮಾಜ ಸಂಘದಿಂದ ಈಚೆಗೆ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 603 ನೇ ಜಯಂತಿಯಲ್ಲಿ ಅವರು ಮಾತನಾಡಿದರು.
‘ರೆಡ್ಡಿಗಳನ್ನು ಬರೀ ಕೃಷಿಕರಂತೆ ಮತ್ತು ವ್ಯಾಪಾರಿಗಳಂತೆ ಬಿಂಬಿಸಲಾಗುತ್ತಿದೆ. ಮರಾಠ, ರಜಪೂತ ರಾಜರ ಇತಿಹಾಸ ಹೇಳುವಂತೆ ಇವರ ಇತಿಹಾಸ ದಾಖಲಿಸದೆ ಅನ್ಯಾಯ ಮಾಡಲಾಗಿದೆ. ರೆಡ್ಡಿ ಸಾಮ್ರಾಜ್ಯ ಇದ್ದ ಬಗ್ಗೆ ಪುರಾವೆಗಳು ಲಭ್ಯ ಇದ್ದರೂ ಈ ರೀತಿ ತಾರತಮ್ಯ ಎಸಗಿರುವುದು ಸರಿ ಅಲ್ಲ’ ಎಂದರು.
ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ,‘ಉದ್ಯಾನದ ಸ್ಥಳವು ಆಕರ್ಷಣೀಯ ಸ್ಥಳವಾಗಿದ್ದು, ಆಹ್ಲಾದಕರ ವಾತಾವರಣ ಹೊಂದಿದೆ. ಇಲ್ಲಿ ಬೃಹತ್ ಮೂರ್ತಿ ಪ್ರತಿಷ್ಠಾಪಿಸುವ ಜೊತೆಗೆ ಸುತ್ತುಗೋಡೆ ನಿರ್ಮಿಸಿ ವಿವಿಧ ಕಾಮಗಾರಿ ಕೈಗೊಳ್ಳಬೇಕು. ಹೇಮರೆಡ್ಡಿ ಮಲ್ಲಮ್ಮನವರ ಆದರ್ಶದ ಪಾಲನೆ ಆಗಬೇಕು’ ಎಂದು ನುಡಿದರು.
ಕಲಬುರಗಿ ಮಹಾನಗರಪಾಲಿಕೆ ಎಸ್ಟೆಟ್ ಅಧಿಕಾರಿ ಸಾವಿತ್ರಿ ಸಲಗರ, ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಅಶೋಕರೆಡ್ಡಿ ನಿಂಗಾವರೆ, ಹೇಮರೆಡ್ಡಿ ಗೌರೆ, ಕಲ್ಯಾಣರಾವ್ ಮದರಗಾಂವಕರ್ ಮಾತನಾಡಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ, ತಾಲ್ಲೂಕು ರೆಡ್ಡಿ ಸಮಾಜ ಸಂಘದ ಅಧ್ಯಕ್ಷ ವಿಜಯಕುಮಾರರೆಡ್ಡಿ, ರಾಜರೆಡ್ಡಿ ಪಾಟೀಲ, ಅಶೋಕರೆಡ್ಡಿ ಕುದಗೆ, ಬಾಬುರೆಡ್ಡಿ ಪಾಟೀಲ, ನಯೀಮುದ್ದೀನ್, ಶರಣಬಸವ ಬಿರಾದಾರ, ಸಂತೊಷ ಅಕ್ಕಣ್ಣ, ಸೂರ್ಯಕಾಂತ ಪಾಟೀಲ, ಅನಿಲ ಕಾಂಬಳೆ, ವೀರೇಂದ್ರರೆಡ್ಡಿ, ವಿಷ್ಣುರೆಡ್ಡಿ, ರಾಜಕುಮಾರ ನಂದೋಡೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.