ಕಮಲನಗರ: ತಾಲ್ಲೂಕಿನ ಎಲ್ಲೆಡೆ ಹೋಳಾ(ಹ್ವಾಳಾ) ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಹ್ವಾಳಾ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ರೈತರಿಗೆ ಖುಷಿ ಕೊಡುವ ಹಬ್ಬವಾಗಿದೆ. ಪ್ರತಿವರ್ಷ ಶ್ರಾವಣ ಮಾಸದ ಅಂತ್ಯದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.
ಕಮಲನಗರ, ಸೋನಾಳ, ಬಾಲೂರ, ಖತಗಾಂವ ಮದನೂರ, ಡೋಣಗಾಂವ, ಕೋಟಗ್ಯಾಳ, ತೋರಣಾ, ಹೋಳಸಮುದ್ರ, ಸಂಗಮ, ಡಿಗ್ಗಿ, ಖೇಡ, ಠಾಣಕೂಶನೂರ ಹಾಗೂ ದಾಬಕಾ ಸೇರಿ ಹಳ್ಳಿಗಳಲ್ಲಿ ಎಲ್ಲೆಡೆ ಬೆಳಿಗ್ಗೆ ಎತ್ತುಗಳ ಮೈತೊಳೆದು ಎತ್ತಿನ ಕೋಡುಗಳಿಗೆ ಬಣ್ಣ ಬಳಿದು ಅದಕ್ಕೆ ರಾಖಿ, ಬಲೂನ್, ಕೋರಳಲ್ಲಿ ಗಂಟೆಗ, ವಿವಿಧ ಪ್ರಕಾರದ ಗೆಜ್ಜೆ ಹಾಕಿ. ಹೊಸ ಮೂಗುದಾರ ತೊಡೆಸಿ, ಬಾಸಿಂಗ ಕಟ್ಟಿ ಶೃಂಗಾರಗೊಳಿಸಲಾಯಿತು.
ಗ್ರಾಮದ ಆರಾಧ್ಯ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಮೃಷ್ಠಾನ ಭೋಜನ ಸವಿದು ವಿಶ್ರಮಿಸಿದರು. ಸಂಜೆ ಹೊತ್ತು ಪೂಜೆ ಮಾಡಿ ಹನುಮಾನ ಮಂದಿರದಲ್ಲಿ ಜಾನುವಾರಗಳ ಓಟ ಏರ್ಪಡಿಸಲಾಗುತ್ತದೆ.
ಸಿಂಗಾರಗೊಂಡ ಜಾನುವಾರಗಳು ರಿಂಗಣಿಸುವ ಶಬ್ದದೊಂದಿಗೆ ಗುಡಿ ಸುತ್ತಲೂ ಓಡುತ್ತಿದ್ದರೆ, ನೋಡುಗರಿಗೆ ಎಲ್ಲಿಲ್ಲದ
ಸಂಭ್ರಮ.
ಜೋಡು ಎತ್ತುಗಳ ಓಡಾಟಕ್ಕೆ ಮುನ್ನ ಸ್ಪರ್ಧೆ ವಿಕ್ಷಿಸಲು ಗ್ರಾಮದ ಗಣ್ಯರು, ಮಹಿಳೆಯರು, ಯುವಕರು, ಭೇದ ಭಾವವಿಲ್ಲದೆ ಪಾಲ್ಗೊಂಡು ಸಂಭ್ರಮಿಸಿದರು.
ಹಲವೂ ಕಡೆ ಕಾರ ಹುಣ್ಣಿಮೆ ಎಂದರೆ, ಇನ್ನು ಕೆಲವಡೆ ಹೋಳ(ಹ್ವಾಳಾ) ಹಬ್ಬ ಆಚರಿಸುತ್ತಾರೆ.ಇಂಥ ಪುರಾತನ ಗ್ರಾಮೀಣ ಸೊಗಡು ಹಬ್ಬಗಳಿಗೆ ಸರಕಾರದಿಂದ ನೆರವೂ ಪ್ರೋತ್ಸಾಹ ಸಿಗುವಂತಾಗಬೇಕು ಗ್ರಾಮೀಣ ಹಬ್ಬಗಳ ವಿಶೇಷತೆ ಕುರಿತು ಜನ ಸಾಮಾನ್ಯರಿಗೆ ಇಂದಿನ ನವಯುವ ಪೀಳಿಗೆಗೆ ತಿಳಿಸುವಂತಾದಬೇಕಾದ ಅಗತ್ಯವಿದೆ ಎಂದು ಹಿರಿಯರು ತಿಳಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.