ಬೀದರ್: ಕೋವಿಡ್ 19 ಪ್ರಯುಕ್ತ ವಿಧಿಸಲಾಗಿದ್ದ ಲಾಕ್ಡೌನ್ನಿಂದ ನಷ್ಟ ಅನುಭವಿಸಿರುವ ಹೂ, ಹಣ್ಣು ಬೆಳೆಗಾರರನ್ನು ಮತ್ತೆ ತೋಟಗಾರಿಕೆ ಬೆಳೆಯತ್ತ ಆಕರ್ಷಿಸಲು ಮೊದಲ ಬಾರಿಗೆ ಸ್ಟೀಲ್ ಟ್ಯಾಂಕ್ ನಿರ್ಮಿಸಿಕೊಳ್ಳ ಬಯಸುವ ರೈತರಿಗೆ ತೋಟಗಾರಿಕೆ ಇಲಾಖೆ ಸಹಾಯಧನ ನೀಡಲು ಮುಂದಾಗಿದೆ.
ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗಳಿಂದ ನಿಗದಿತ ಅರ್ಜಿ ನಮೂ£ ಪಡೆದು ಪಹಣಿ, ಹೋಲ್ಡಿಂಗ್, ನೀರು ಬಳಕೆ ಪ್ರಮಾಣ ಪತ್ರ, ಕಚ್ಚಾ ನಕಾಶೆ, ತೋಟಗಾರಿಕೆ ಬೆಳೆ ದೃಢೀಕರಣ, ಕೃಷಿ ಇಲಾಖೆಯ ನಿರೀಕ್ಷಣಾ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 5 ರ ಒಳಗೆ ಸಲ್ಲಿಸಿ ಸಹಾಯ ಧನ ಪಡೆದುಕೊಳ್ಳಬಹುದು.
2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬರುವ ಈರುಳ್ಳಿ ಶೇಖರಣಾ ಘಟಕ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಅನುಮೋದಿತ ಕಂಪನಿಗಳಿಂದ ಖರೀದಿಸಲಾದ ವಿವಿಧ ಯಂತ್ರೋಪಕರಣಗಳಾದ ಔಷಧಿ ಸಿಂಪರಣಾ ಯಂತ್ರ, ಕಳೆ ತೆಗೆಯುವ ಯಂತ್ರ, ರೋಟೋವೆಟರ್, ಕಲ್ಟಿವೇಟರ್, ಪವರ್ ಟಿಲ್ಲರ್, ಪವರ್ ವೀಡರ್ ಹಾಗೂ ರೈತರಿಗೆ ತಮ್ಮ ತೋಟಗಳಲ್ಲಿ ಅನುಕೂಲವಾಗುವ ಯಂತ್ರಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ 50 ಮತ್ತು ಇತರೆ ವರ್ಗದವರಿಗೆ ಶೇ 40ರಷ್ಟು ಸಹಾಯಧನದ ಇದೆ. ಕಳೆದ ಮೂರು ವರ್ಷದ ಹಳೆಯ ಪಾಲಿಮನೆ ಘಟಕದ ದುರಸ್ತಿಗಾಗಿ ಪಾಲಿಥೀನ್ ಶೀಟ್ ಹಾಗೂ ಗಿಡಗಳ ಬದಲಾವಣೆಗೂ ಸಹಾಯಧನ ನೀಡಲಾಗುತ್ತಿದೆ.
ನೀರು ಸಂಗ್ರಹಣಾ ಘಟಕಗಳನ್ನು ನೆಲಮಟ್ಟಕ್ಕಿಂತ ಮೇಲೆ (ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್) ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಜಿಲ್ಲೆಗೆ 7 ಭೌತಿಕ ಗುರಿ ನೀಡಲಾಗಿದೆ. ನೆಲಮಟ್ಟಕ್ಕಿಂತ ಕೆಳಗೆ ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಜಿಲ್ಲೆಗೆ 13 ಭೌತಿಕ ಗುರಿ ನೀಡಲಾಗಿದೆ. ಆರ್ಥಿಕವಾಗಿ ರೂ.42 ಲಕ್ಷ ಗುರಿ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.