ಬಸವಕಲ್ಯಾಣ: ಬಡವರಿಗೆ ನರೇಗಾ ಯೋಜನೆ ಕಾಮಗಾರಿ ಒದಗಿಸದೆ ಅನ್ಯಾಯ ಮಾಡುತ್ತಿರುವ ಬೆಟಬಾಲ್ಕುಂದಾ ಗ್ರಾಮ ಪಂಚಾಯಿತಿಯವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಖಂಡಾಳ ಗ್ರಾಮಸ್ಥರು ಮಂಗಳವಾರ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ರಾಜಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಟಬಾಲ್ಕುಂದಾ ವ್ಯಾಪ್ತಿಯ ಇತರೆಡೆ ಕೆಲಸ ನಡೆದಿದೆ. ಆದರೆ, ಖಂಡಾಳ ಗ್ರಾಮದಲ್ಲಿ ಮಾತ್ರ ನರೇಗಾ ಕೆಲಸ ಕೈಗೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿಯವರಿಗೆ ವಿಚಾರಿಸಿದರೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕೇಳಿ ಎನ್ನಲಾಗುತ್ತಿದೆ. ಇಲ್ಲಿ ವಿಚಾರಿಸಿದರೆ ನಮಗೇನು ಗೊತ್ತು ಎನ್ನುತ್ತಿದ್ದಾರೆ. ಹೀಗೆ ಬಡವರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದಲ್ಲದೆ 15 ನೇ ಹಣಕಾಸು ಯೋಜನೆಯಲ್ಲಿ ಸಮರ್ಪಕ ಕೆಲಸ ಕೈಗೊಳ್ಳದೆ ಹಣದ ದುರುಪಯೋಗ ಮಾಡಲಾಗಿದೆ. ಬೋರವೆಲ್ ದುರಸ್ತಿ ಕೆಲಸದಲ್ಲೂ ಅವ್ಯವಹಾರ ನಡೆದಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಚನ್ನವೀರ ಲಕಶೆಟ್ಟಿ, ಪ್ರಮುಖರಾದ ಶಿವಪುತ್ರ ವರದಪ್ಪ, ಶಂಕರ ಜುಲೇಕರ್, ಸಂಗಮೇಶ ಪಾಟೀಲ, ನೀಲಮ್ಮ ಭುಜಂಗೆ, ಲಕ್ಷ್ಮಿ ನಾಗನಾಥ, ಜ್ಯೋತಿ ವೀರಬಸು, ರಂಗಮ್ಮ ಶೆಟ್ಟೆಪ್ಪ, ಮಡಿವಾಳ ಮಹಾಲಿಂಗ, ವಿಠಲ್ ಬಿರಾದಾರ, ಲಾವಣ್ಯ, ಬಾಲಾಜಿ, ವೈಜನಾಥ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.