ಬೀದರ್: ಬ್ಯಾಂಕ್ನಿಂದ ಹಣ ಪಡೆದು ಹೋಗುತ್ತಿದ್ದ ಗ್ರಾಹಕರನ್ನು ಹಿಂದಬಾಲಿಸಿ ಹಣ ದೋಚುತ್ತಿದ್ದ ಆರು ಜನ ಅಂತರರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಾಲಿ ತಾಲ್ಲೂಕಿನ ಕಪರಲ್ತಪ್ಪಾದ ಗೊಗಲ್ ಮಾಧವ ಸುಂದರಂ, ಅಕುಲ್ ಅರ್ಜುನ ಥಾಮಸ್, ಅವುಲ್ ರಾಕೇಶ ದಾವಿದ, ಗೊಡ್ಡಟ್ಟಿ ರಾಕೇಶ ಯೇಸು, ಅಕುಲ್ ವಿಜಯಕುಮಾರ ಜಯಪಾಲ್ ಹಾಗೂ ಅಕುಲ್ ಸುಶೀಲಾ ವಿಜಯಕುಮಾರ ಬಂಧಿತರು.
ಶುಕ್ರವಾರ ಹುಮನಾಬಾದ್ನ ಬಸ್ ನಿಲ್ದಾಣದಲ್ಲಿ ನಾಲ್ವರು ಹಾಗೂ ಟೀಚರ್ಸ್ ಕಾಲೊನಿಯ ಮನೆಯಲ್ಲಿ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ ಎರಡು ಹೊಂಡಾ ಶೈನ್ ದ್ವಿಚಕ್ರ ವಾಹನ, ₹95 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ₹1.55 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬೀದರ್ ನಗರ ಹಾಗೂ ಔರಾದ್ನಲ್ಲಿ ಏಳು ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದ ಲಾತೂರ್ನಲ್ಲೂ ಕಳ್ಳತನ ಮಾಡಿದ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹೊರ ರಾಜ್ಯಗಳಿಂದ ಬಂದು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿದ್ದವು. ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪಿಯ ಸಿಂಡಿಕೇಟ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಹಾಗೂ ವಿವಿಧೆಡೆ ಹಣ ತೆಗೆದುಕೊಂಡು ಹೋಗುತ್ತಿದ್ದವರ ಮೇಲೆ ನಿಗಾ ಇಟ್ಟು, ಹಿಂಬಾಲಿಸಿ ಅವರು ಕಾರು, ಕೈಚೀಲಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಹಣ ದೋಚಿಕೊಂಡು ಹೋಗುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು. ಪ್ರಕರಣಗಳ ಕಾರಣ ಸಿಪಿಐ ಡಿ.ಜಿ. ರಾಜಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತಂಡವು ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.