ಔರಾದ್: ‘ದೇಶದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಜಾಗೃತರಾದರೆ ಮಾತ್ರ ನಾವು ಸಂವಿಧಾನದತ್ತವಾಗಿ ಸಿಗುವ ಸೌಲಭ್ಯ ಪಡೆಯಲು ಸಾಧ್ಯ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬಹುಜನ ಜನಸಂಪರ್ಕ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಅಂಬೇಡ್ಕರ್ ಅವರು ನಮಗೆ ಸಂವಿಧಾನದ ಮೂಲಕ ಎಲ್ಲವೂ ಕೊಟ್ಟಿದ್ದಾರೆ. ಅದನ್ನು ನಾವು ಪಡೆಯಲು ಗಟ್ಟಿ ಧ್ವನಿ ಬೇಕು. ಅಂತಹ ಧ್ವನಿ ಒಗ್ಗೂಡಿಸಲು ಜನಸಂಪರ್ಕ ಕಚೇರಿ ತೆರೆದಿದ್ದು ಸಂತೋಷ ಸಂಗತಿ. ಇಂತಹ ಸಂಘಟನೆ ರಾಜಕೀಯ ರಹಿತವಾಗಿದ್ದರೆ ಮಾತ್ರ ಬಹುದಿನ ಬಾಳಲು ಸಾಧ್ಯ’ ಎಂದು ಸಲಹೆ ನೀಡಿದರು.
ಮುಜೀಬ್ ಮಾತನಾಡಿ, ‘ಭಾರತದಲ್ಲಿ ಸಂವಿಧಾನ ಶ್ರೇಷ್ಠ. ಈ ಮೂಲಕ ಅಧಿಕಾರ ಪಡೆದ ಕೆಲವರು ವಿರೋಧ ಮಾಡುತ್ತಾರೆ. ಈ ದೇಶದಲ್ಲಿ ಸಂವಿಧಾನ ಇರುವವರೆಗೆ ನಾವು ಹೆದರುವ ಅಗತ್ಯವಿಲ್ಲ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ ರಾಹುಲ್ ಖಂದಾರೆ ಮಾತನಾಡಿ, ‘ಔರಾದ್ ಮೀಸಲು ಕ್ಷೇತ್ರವಾದರೂ ಇಲ್ಲಿಯ ಬಹುಜನರು ಸೌಲಭ್ಯಕ್ಕಾಗಿ ಹೋರಾಡಬೇಕಿದೆ. ಅವರಲ್ಲಿ ಜಾಗೃತಿ ಮೂಡಿಸಲು ಜನಸಂಪರ್ಕ ಕಚೇರಿ ತೆರೆಯಲಾಗಿದೆ’ ಎಂದು ಹೇಳಿದರು.
ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ದಸ್ತಗೀರ, ಪ್ರಾಂಶುಪಾಲ ಮನ್ಮತ ಡೋಳೆ, ಪತ್ರಕರ್ತ ಬಾಲಾಜಿ ಕುಂಬಾರ ಮತ್ತಿತರರು ತಮ್ಮ ವಿಚಾರ ಮಂಡಿಸಿದರು.
ಮುಖಂಡ ರಾಜಕುಮಾರ ಸಿಂಧೆ, ಶಿವಮೂರ್ತಿ ಸುಬಾನೆ, ಬಿಎಸ್ಪಿ ಮುಖಂಡ ಕಪಿಲ್ ಗೋಡಬೋಲೆ, ನಗರಸಭೆ ಸದಸ್ಯ ಸೂರ್ಯಕಾಂತ ಸಾದುರೆ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬ್ರೀಶ್ ಕುದ್ರೆ, ಫಿರ್ದೋಸ್ ಪಟೇಲ್, ಗಣಪತರಾವ ವಾಸುದೇವ, ಸುಭಾಷ ಲಾಧಾ, ತುಕಾರಾಮ ಹಸನ್ಮುಖಿ, ನವನಾಥ ಚಟ್ನಾಳ, ಪ್ರವೀಣ ಕಾರಂಜೆ, ಯಶವಂತ ಕಾಂಬಳೆ, ಸಿದ್ಧಾರ್ಥ ಭೋಸ್ಲೆ, ಸುಂದರ ಮೇತ್ರೆ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.