
ಕಮಲನಗರ: ‘ಮಕ್ಕಳು ಗುರಿಯ ಜೊತೆಗೆ ಮೌಲ್ಯವನ್ನು ರೂಢಿಸಿಕೊಳ್ಳಬೇಕು. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳ ಕಾಳಜಿವಹಿಸಿ ಶೈಕ್ಷಣಿಕ ಆಶಯ ಈಡೇರಿಸಬೇಕು’ ಎಂದು ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಗುರು ಕಾರುಣ್ಯ ಪಬ್ಲಿಕ್ ಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 7ನೇ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ಆಶಯಗಳನ್ನು ಈಡೇರಿಸುವ ಅವಶ್ಯಕತೆ ಇದೆ. ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಪಾಲಕರು ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯ. ಪಾಲಕರು ಮನೆಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೇ, ಶಾಲೆಗೆ ಹಾಜರಾಗಿದ್ದಾರೆಯೇ ಎಂದು ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ಖಚಿತ ಮಾಡಿಕೊಳ್ಳಬೇಕು’ ಎಂದರು.
‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಸುವುದು ಪೋಷಕರ ಕರ್ತವ್ಯ. ಮಕ್ಕಳ ಸಮಸ್ಯೆ ತಿಳಿದು ಅದನ್ನು ಸರಿಪಡಿಸಲು ಯತ್ನಿಸಬೇಕು. ಅವರಿಗೆ ಶಿಸ್ತು, ಸಂಸ್ಕೃತಿ ಕಲಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹಣಮಂತರಾಯ ಕೌಟಗೆ ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವುದು, ಅವರಲ್ಲಿ ಸಂಸ್ಕಾರ ಮೂಡಿಸುವುದು ಶಿಕ್ಷಕರ, ಪಾಲಕರ ಮತ್ತು ಸಮಾಜದ ಕರ್ತವ್ಯ’ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಕಾರ, ಮಾನವೀಯತೆ, ಭ್ರಾತೃತ್ವ, ದೇಶಪ್ರೇಮ ಮೈಗೂಡಿಸಬೇಕು. ಇದುವೇ ನಿಜವಾದ ಶಿಕ್ಷಣ’ ಎಂದರು.
ಪಿಎಸ್ಐ ಆಶಾ ರಾಠೋಡ ಮಾತನಾಡಿದರು. ಹಿರೇಮಠ ಸಂಸ್ಥಾನ ವಿದ್ಯಾಪೀಠ ಆಡಳಿತಾಧಿಕಾರಿ ಮೋಹನ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ ಸಜ್ಜನ, ಎಸ್ಬಿಐ ವ್ಯವಸ್ಥಾಪಕ ಪ್ರೇಮಕುಮಾರ, ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಮುಖಂಡರಾದ ಶಿವಾನಂದ ವಡ್ಡೆ, ರಾಜಕುಮಾರ ಅಲಬಿದೆ, ಸುರೇಶ ಸೋಲ್ಲಾಪೂರೆ, ಅವಿನಾಶ ಶಿವಣಕರ್, ಗುರುಶಾಂತ ಶಿವಣಕರ್, ರಾಜಕುಮಾರ ಬಿರಾದಾರ, ಮಾದಪ್ಪ ಮಡಿವಾಳ, ಭೀಮರಾವ ಸಿರಗಿರೆ, ಶಿವರಾಜ ಪಾಟೀಲ, ನೀಲಕಂಠ ಪಾಂಡರೆ, ರಮೇಶ ಟೋಕರೆ ಇದ್ದರು.
ಆಡಳಿತಾಧಿಕಾರಿ ಚನ್ನಬಸವ ಘಾಳೆ ಪ್ರಾಸ್ತವಿಕ ಮಾತನಾಡಿದರು. ವಿವೇಕಾನಂದ ಬಿರಾದಾರ, ಚಂದ್ರಕಲಾ ಸ್ವಾಗತಿಸಿದರು. ಶೇಖರ ಖೆಳಗೆ, ರೀಪಿಕಾ ನಿರೂಪಿಸಿದರು. ರೂಹಿನಾ ಪಠಾಣ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.