ADVERTISEMENT

ಕೋವಿಡ್ ಕರಿ ನೆರಳಲ್ಲೂ ಕಾರ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 16:29 IST
Last Updated 24 ಜೂನ್ 2021, 16:29 IST
ಕಾರ ಹುಣ್ಣಿಮೆ ಪ್ರಯುಕ್ತ ಬೀದರ್ ತಾಲ್ಲೂಕಿನ ಚಟ್ನಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಅವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿದರು
ಕಾರ ಹುಣ್ಣಿಮೆ ಪ್ರಯುಕ್ತ ಬೀದರ್ ತಾಲ್ಲೂಕಿನ ಚಟ್ನಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಅವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಸಿಂಗರಿಸಿದರು   

ಬೀದರ್: ಮುಂಗಾರು ಹಂಗಾಮಿನ ರೈತರ ಮೊದಲ ಹಬ್ಬ ಎಂದೇ ಕರೆಯಲಾಗುವ ಕಾರ ಹುಣ್ಣಿಮೆಯನ್ನು ಕೋವಿಡ್ ಕರಿ ನೆರಳ ನಡುವೆಯೂ ಜಿಲ್ಲೆಯಲ್ಲಿ ಗುರುವಾರ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ರೈತರು ಎತ್ತುಗಳ ಮೈ ತೊಳೆದರು. ಎತ್ತಿನ ಗಾಡಿ, ಕೂರಿಗೆ, ಕುಂಟಿ, ನೊಗ ಮೊದಲಾದ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಿದರು.

ಎತ್ತುಗಳಿಗೆ ಬಣ್ಣ ಬಳಿದು, ಹಣೆಗೆ ಬಾಸಿಂಗ, ಕೊರಳಲ್ಲಿ ಗೆಜ್ಜೆ ಸರ, ಘಂಟೆ ಕಟ್ಟಿದರು. ಮೈಮೇಲೆ ಅಲಂಕಾರಿಕ ವಸ್ತುಗಳನ್ನು ಹಾಕಿ, ಶೃಂಗಾರಗೊಳಿಸಿದರು. ಪೂಜೆ ಸಲ್ಲಿಸಿ, ಹೋಳಿಗೆ, ಹುಗ್ಗಿ ತಿನ್ನಿಸಿದರು.

ADVERTISEMENT

ನಂತರ ಎತ್ತುಗಳನ್ನು ದೇವಸ್ಥಾನಗಳಿಗೆ ಒಯ್ದು, ಮಳೆ, ಬೆಳೆ ಚೆನ್ನಾಗಿ ಬರಲಿ, ಕೃಷಿಗೆ ಬೆನ್ನೆಲುಬು ಆಗಿರುವ ಎತ್ತುಗಳಿಗೆ ಯಾವುದೇ ತೊಂದರೆ ಆಗದಿರಲಿ, ಕೋವಿಡ್ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ತಾಲ್ಲೂಕಿನ ಜನವಾಡ, ಕಮಠಾಣ, ಬಗದಲ್, ಮನ್ನಳ್ಳಿ, ಚಟ್ನಳ್ಳಿ, ಅಲಿಯಂಬರ್, ಮಾಳೆಗಾಂವ್, ಬಾವಗಿ ಸೇರಿದಂತೆ ವಿವಿಧೆಡೆ ಹಬ್ಬದ ಸಂಭ್ರಮ ಕಂಡು ಬಂದಿತು.

ಕಾರ ಹುಣ್ಣಿಮೆ ಪ್ರಯುಕ್ತ ಹಿಂದಿನಿಂದಲೂ ಎತ್ತುಗಳ ಮೆರವಣಿಗೆ ಮಾಡುತ್ತ ಬರಲಾಗಿದೆ. ಕೋವಿಡ್ ಕಾರಣ ಈ ಬಾರಿ ಕೆಲ ಕಡೆ ಮೆರವಣಿಗೆ ನಡೆದರೆ, ಇನ್ನು ಕೆಲ ಕಡೆ ಸಾಂಕೇತಿಕವಾಗಿ ಹಬ್ಬ ಆಚರಣೆ ಮಾಡಲಾಗಿದೆ ಎಂದು ಬಾವಗಿಯ ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.