ADVERTISEMENT

ಭಾಲ್ಕಿ: ಸೇತುವೆ ದಾಟುವಾಗ ವ್ಯಕ್ತಿ ಕೊಚ್ಚಿಕೊಂಡು ಹೋಗಿ ಸಾವು

ಧಾರಾಕಾರ ಮಳೆ; ಹೊಲಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 6:28 IST
Last Updated 17 ಸೆಪ್ಟೆಂಬರ್ 2020, 6:28 IST
ಭಾಲ್ಕಿ ತಾಲ್ಲೂಕಿನ ಸಾಯಿಗಾಂವ ಹತ್ತಿರ ಹಳ್ಳದ ಸೇತುವೆ ದಾಟುವಾಗ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋದ ಸ್ಥಳಕ್ಕೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನೇತೃತ್ವದ ತಂಡ ಭೇಟಿ ನೀಡಿ, ಕಾರ್ಯಾಚರಣೆ ನಡೆಸಿತು
ಭಾಲ್ಕಿ ತಾಲ್ಲೂಕಿನ ಸಾಯಿಗಾಂವ ಹತ್ತಿರ ಹಳ್ಳದ ಸೇತುವೆ ದಾಟುವಾಗ ವ್ಯಕ್ತಿಯೋರ್ವ ಕೊಚ್ಚಿಕೊಂಡು ಹೋದ ಸ್ಥಳಕ್ಕೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನೇತೃತ್ವದ ತಂಡ ಭೇಟಿ ನೀಡಿ, ಕಾರ್ಯಾಚರಣೆ ನಡೆಸಿತು   

ಭಾಲ್ಕಿ: ತಾಲ್ಲೂಕಿನ ಸಾಯಿಗಾಂವ ಹತ್ತಿರ ಹಳ್ಳದ ಸೇತುವೆಯನ್ನು ಬೈಕ್‌ನಲ್ಲಿ ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬೋಳೆಗಾಂವ ಗ್ರಾಮದ ಮನೋಜ ಗುಂಡಾಜಿ (31) ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ನಡೆದಿದೆ.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನೇತೃತ್ವದ ಅಗ್ನಿಶಾಮಕ, ಪೊಲೀಸ್ ಅಧಿಕಾರಿಗಳ ತಂಡ ನಡೆಸಿದ ಶೋಧ ಕಾರ್ಯದಿಂದ ಸಂಜೆ 4 ಗಂಟೆಗೆ ಅವರ ಶವ ಸೇತುವೆಯಿಂದ 1 ಕಿ.ಮೀ ಅಂತರದಲ್ಲಿ ಸಿಕ್ಕಿದೆ.

ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಲ್ಲೂಕಿನ ಲಖನಗಾಂವ, ಸಾಯಿಗಾಂವ ಹೋಬಳಿಯಲ್ಲಿ ಕ್ರಮವಾಗಿ 165, 124 ಮಿ.ಮೀ ಮಳೆ ಆಗಿದೆ. ಮಾಂಜ್ರಾ ನದಿಗೆ ನಿರ್ಮಿಸಿರುವ ಲಖನಗಾಂವ, ಸಾಯಿಗಾಂವ ಸೇತುವೆ ಅಕ್ಕಪಕ್ಕ ಕಾಸರತೂಗಾಂವ ಗ್ರಾಮದ ಹೊರ ವಲಯದ ಹೊಲಗಳು ನೀರಿನಿಂದ ಜಲಾವೃತಗೊಂಡಿವೆ.

ಸಾಯಿಗಾಂವ ಸೇತುವೆ ಮುಳುಗಿದ ಪರಿಣಾಮ ಭಾಲ್ಕಿ-ಸಾಯಿಗಾಂವ, ಭಾಲ್ಕಿ-ಬೀರಿ (ಬಿ), ಭಾತಂಬ್ರಾ- ಕಮಲನಗರ ಸಂಪರ್ಕ ಐದು ಗಂಟೆಗಳ ಕಾಲ ಕಡಿತಗೊಂಡಿತ್ತು.

ಕುರುಬಖೇಳಗಿ ಗ್ರಾಮದ ರೈತರಾದ ನಾಗರಾಜ ಚನ್ನಪ್ಪನೊರ್, ಸುಧಾಕರ ಚನ್ನಪ್ಪನೊರ್, ವಿಜಯಕುಮಾರ ಬಿರಾದರ, ಸರಸ್ವತಿ ಮುದ್ದಾಳೆ, ಕಪಿಲ್ ಮಜಕುರಿ ಅವರ ಹೊಲಗಳಿಗೆ ಪಕ್ಕದ ಹಳ್ಳದ ನೀರು ನುಗ್ಗಿದ್ದರಿಂದ 25 ಎಕರೆ ಸೋಯಾಬಿನ್, ತೊಗರಿ, ಉದ್ದು ಬೆಳೆ ನಾಶವಾಗಿದೆ

ಕೇಸರ ಜವಳಗಾ-ಅಳವಾಯಿ ಮಾರ್ಗದ ಸ್ವಲ್ಪ ರಸ್ತೆ ಹಾಳಾಗಿದೆ. ಗುರುವಾರದಿಂದ ಅತಿವೃಷ್ಟಿಯಿಂದಾದ ಬೆಳೆ ಹಾನಿಯ ಸಮೀಕ್ಷೆ ನಡೆಸಲಿದ್ದೇವೆ ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.