ಹುಮನಾಬಾದ್: ‘ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಪುನಶ್ಚೇತನ ಮಾಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ, ವಿಶ್ವನಾಥ್ ಪಾಟೀಲ ಮಾಡಗೂಳ ಆರೋಪಿಸಿದ್ದಾರೆ.
ಪಟ್ಟಣದ ಮಾಜಿ ಶಾಸಕ ಸುಭಾಷ ಕಲ್ಲೂರ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಚಿವರು ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ಕಾರ್ಖಾನೆ ಆರಂಭ ಮಾಡಬೇಕಿತ್ತು. ಆದರೆ ನಿರ್ಲಕ್ಷ ಮಾಡುತ್ತಿರುವುದು ಸರಿಯಲ್ಲ’ ಎಂದರು.
‘ಬಿಎಸ್ಎಸ್ಕೆ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಕಾರ್ಖಾನೆ ಎರಡು ವರ್ಷಗಳಿಂದ ಬಂದ್ ಆಗಿತ್ತು . ಇದನ್ನು ಪ್ರಾರಂಭಿಸಲು ಅನೇಕ ಒತ್ತಡಗಳು ಎದುರಾದರೂ ಸಹ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ 50 ದಿನಗಳಲ್ಲಿ 54,574 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದೆವು. ಹಳೆ ಆಡಳಿತ ಮಂಡಳಿಯವರ ಕಾಲಾವಧಿಯಲ್ಲಿ 5 ವರ್ಷಗಳಿಂದ ಯಾವುದೇ ಲೆಕ್ಕ ಪತ್ರಗಳ ಅಡಿಟ್ ಸಹ ಮಾಡದೇ ಬೇಜವಾಬ್ದಾರಿ ತೋರಿದ್ದರು’ ಎಂದರು.
ನಾವು ಅಧಿಕಾರ ವಹಿಸಿಕೊಂಡಿದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ನಯಾ ಪೈಸೆ ಇರಲಿಲ್ಲ. ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಸಂಪೂರ್ಣ ಹಾಳಾಗಿತ್ತು. ಹಿಂದೆ 5 ವರ್ಷ ಸಂಜಯ್ ಖೇಣಿ ಅಧಿಕಾರ ಮಾಡಿದ್ದಾರೆ. ಅವರ ಅವಧಿಯಲ್ಲಿ ಕಾರ್ಖಾನೆಯ ಬಗ್ಗೆ ಒಂದೇ ಒಂದು ಲೆಕ್ಕ ಪತ್ರಗಳು ಸಹ ಇರಲಿಲ್ಲ. ಅವರ ಅವಧಿಯಲ್ಲಿ ಸರ್ಕಾರದಿಂದ ₹ 30 ಕೋಟಿ ಅನುದಾನ ನೀಡಿದರೂ ಕಾರ್ಖಾನೆ ಪ್ರಾರಂಭ ಮಾಡಿರಲಿಲ್ಲ’ ಎಂದರು.
‘ಖಂಡ್ರೆ ರಾಜಕೀಯದಲ್ಲಿ ಬೆಳೆಯಲು ಬಿಎಸ್ಎಸ್ಕೆ ಕಾರಣ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯಿಂದ ಜಿಲ್ಲೆಯಲ್ಲಿ ಖಂಡ್ರೆ ಕುಟುಂಬ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಕಾರ್ಖಾನೆಯ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಹೇಳಿದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈ ಕಾರ್ಖಾನೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ರಾಜ್ಯ ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆಯಲು ಮೊದಲು ನೆಲೆ ಕೊಟ್ಟಿದ್ದೇ ಬಿಎಸ್ಎಸ್ಕೆ. ಕಾರ್ಖಾನೆ ಪುನಶ್ಚೇತನಕ್ಕೆ ಸಚಿವರು ಮುಂದೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.