ಬೀದರ್: ಬೀದರ್ ಕ್ಷೇತ್ರದಿಂದ ಬಿಜೆಪಿಯ ಭಗವಂತ ಖೂಬಾ ಲೋಕಸಭೆಗೆ ಪುನರಾಯ್ಕೆಯಾದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ವಿಜಯೋತ್ಸವ ಆಚರಿಸಿದರು.
ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಬಿವಿಬಿ ಕಾಲೇಜಿನ ಮತ ಎಣಿಕೆ ಕೇಂದ್ರದ ಎದುರು ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಪರಸ್ಪರ ಗುಲಾಲು ಎರಚಿ, ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.
ಮತ ಎಣಿಕೆ ಕೇಂದ್ರದಿಂದ ಹೊರ ಬಂದ ನೂತನ ಸಂಸದ ಭಗವಂತ ಖೂಬಾ ಅವರಿಗೆ ಹೂಮಾಲೆ ಹಾಕಿ, ಗುಲಾಲು ಎರಚಿ ಅಭಿನಂದಿಸಿದರು. ಭುಜದ ಮೇಲೆ ಎತ್ತಿಕೊಂಡು ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರದಿಂದ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಖೂಬಾ ಅವರ ಮೆರವಣಿಗೆ ನಡೆಸಿದರು.
ತೆರೆದ ವಾಹನದಲ್ಲಿ ಭಗವಂತ ಖೂಬಾ ಅವರೊಂದಿಗೆ ಔರಾದ್ ಶಾಸಕ ಪ್ರಭು ಚವಾಣ್, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಗುರುನಾಥ ಕೊಳ್ಳೂರು, ಡಿ.ಕೆ. ಸಿದ್ರಾಮ, ಬಾಬುವಾಲಿ, ಜಗದೀಶ ಖೂಬಾ, ಬಾಬುರಾವ್ ಮದಕಟ್ಟಿ, ಈಶ್ವರಸಿಂಗ್ ಠಾಕೂರ್ ಮೊದಲಾದವರು ಇದ್ದರು.
ಖೂಬಾ ಅವರು ವಿಜಯದ ಸಂಕೇತ ತೋರಿಸಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು. ಜನರತ್ತ ಕೈಮುಗಿದು ಕೃತಜ್ಞತೆ ಅರ್ಪಿಸಿದರು. ತೆರೆದ ವಾಹನದ ಹಿಂದೆ ಸಾಲು ಸಾಲು ಕಾರುಗಳು ಇದ್ದವು. ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿದರು. ಅನೇಕರು ಮೈ ಮರೆತು ಕುಣಿದು ಕುಪ್ಪಳಿಸಿ ಪಕ್ಷಾಭಿಮಾನ ಮೆರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.