ಬೀದರ್: ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಗ್ರಾಮವು ಜಿಲ್ಲೆಯ ಮೊದಲ ಸಂಪೂರ್ಣ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗ್ರಾಮ ಎನ್ನುವ ಗೌರವಕ್ಕೆ ಪಾತ್ರವಾಗಿದೆ.
ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಧಾರವಾಡ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ ಅವರು, ಗ್ರಾಮವನ್ನು ಸಂಪೂರ್ಣ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗ್ರಾಮ ಎಂದು ಘೋಷಿಸಿದರು.
‘ಗ್ರಾಮದಲ್ಲಿ 700ಕ್ಕೂ ಅಧಿಕ ಮನೆಗಳಿದ್ದು, ಪ್ರತಿ ಮನೆಯವರೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆದಿದಿದ್ದಾರೆ. ಈ ಮೂಲಕ ಆನ್ಲೈನ್ ಬ್ಯಾಂಕಿಂಗ್, ನಗದು ರಹಿತ ವ್ಯವಹಾರದತ್ತ ಹೆಜ್ಜೆ ಇರಿಸಿದ್ದಾರೆ’ ಎಂದು ಹೇಳಿದರು.
‘ಗ್ರಾಮಸ್ಥರು ಇನ್ನು ಮುಂದೆ ಕೆಇಬಿ ಬಿಲ್ ಪಾವತಿ, ಮೊಬೈಲ್ ರಿಚಾರ್ಜ್ ಮೊದಲಾದ ವ್ಯವಹಾರಗಳನ್ನು ಆನ್ಲೈನ್ನಲ್ಲಿಯೇ ಮಾಡಲಿದ್ದಾರೆ’ ಎಂದು ತಿಳಿಸಿದರು.
‘ನಾರಾಯಣಪುರದ ಅಂಚೆಪಾಲಕ ರಾಜೇಂದ್ರ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ 747 ಖಾತೆಗಳನ್ನು ತೆರೆದು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ನಾರಾಯಣಪುರ ಗ್ರಾಮಸ್ಥರು ಈಗಾಗಲೇ ಹೊಂದಿರುವ ಅಂಚೆ ಉಳಿತಾಯ ಖಾತೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ, ಆನ್ಲೈನ್ ಬ್ಯಾಂಕಿಂಗ್ನ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ’ ಎಂದು ಹೇಳಿದರು.
‘ಅಂಚೆ ಇಲಾಖೆಯು ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೊಸ ಹೊಸ ಯೋಜನೆಗಳ ಮೂಲಕ ಜನರಿಗೆ ನೆರವಾಗುತ್ತಿದೆ’ ಎಂದು ಹೇಳಿದರು.
ವಿಜಯಪುರದ ಅಂಚೆ ಅಧೀಕ್ಷಕ ರಘುನಾಥ ಸ್ವಾಮಿ ಮಾತನಾಡಿ, ‘ನಾರಾಯಣಪುರ ಗ್ರಾಮದ ಜನರು ಪ್ರಗತಿಶೀಲ ಮನೋಭಾವ ಹೊಂದಿರುವುದು ಶ್ಲಾಘನೀಯ’ ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ಮಿರ್ಜಾ ಬೇಗ್ ಮಾತನಾಡಿ, ‘ಸಾರ್ವಜನಿಕರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಾಭ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಭಾಲ್ಕಿ ಅಂಚೆ ನಿರೀಕ್ಷಕ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ರವೀಂದ್ರ ಉಪಸ್ಥಿತರಿದ್ದರು.
ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ ನಿರೂಪಿಸಿದರು. ಹುಮನಾಬಾದ್ ಅಂಚೆ ನಿರೀಕ್ಷಕ ಲಕ್ಷ್ಮಿಕಾಂತ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.