ಬೀದರ್: ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ವೈರಾಣು ವಿರುದ್ಧದ ಹೋರಾಟದಲ್ಲಿ ನಗರದ ವಾಲಿಶ್ರೀ ಆಸ್ಪತ್ರೆಯು ಜಿಲ್ಲಾ ಆಡಳಿತದೊಂದಿಗೆ ಕೈ ಜೋಡಿಸಿರುವುದು ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಕೋವಿಡ್ 19 ಚಿಕಿತ್ಸೆಗೆ ಮುಂದೆ ಬಂದ ಮೊದಲ ಖಾಸಗಿ ಆಸ್ಪತ್ರೆ ಎನ್ನುವ ಗೌರವಕ್ಕೆ ಪಾತ್ರವಾದ ನಗರದ ವಾಲಿಶ್ರೀ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕೋವಿಡ್ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳೂ ಸಹಕರಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ವಾಲಿಶ್ರೀ ಆಸ್ಪತ್ರೆಯ ಅಧ್ಯಕ್ಷ ಡಾ. ರಜನೀಶ ವಾಲಿ ಜುಲೈ 21 ರಿಂದಲೇ ಕೋವಿಡ್ ಚಿಕಿತ್ಸೆ ಆರಂಭಿಸಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು 25 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿತ್ತು. ನಂತರ 40 ಬೆಡ್ ಮೀಸಲಿಡಲಾಯಿತು. ಇದೀಗ ಇನ್ನೂ 40 ಹಾಸಿಗೆ ಮೀಸಲಿಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಿತ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಗುಣಮುಖರಾಗುತ್ತಿರುವ ರೋಗಿಗಳ ಪ್ರಮಾಣ ಶೇ 85 ರಷ್ಟಿದೆ. ಆಸ್ಪತ್ರೆಗೆ ಬರುವ ದಾರಿ ಸಂಪೂರ್ಣವಾಗಿ ಕೆಟ್ಟಿರುವುದು ಗಮನಕ್ಕೆ ಬಂದಿದೆ. ತಕ್ಷಣ ನಗರಸಭೆ ವತಿಯಿಂದ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಆಸ್ಪತ್ರೆಯ ಅಧ್ಯಕ್ಷ ಡಾ. ರಜನೀಶ ವಾಲಿ ಮಾತನಾಡಿ, ಆಸ್ಪತ್ರೆಯಲ್ಲಿನ 100 ಬೆಡ್ಗಳ ಪೈಕಿ 80 ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. 40 ಬೆಡ್ಗಳು ಐಸಿಯು ಸೌಲಭ್ಯ ಹೊಂದಿವೆ. ಲಕ್ಷಣರಹಿತ ಸೋಂಕಿತರ ಚಿಕಿತ್ಸೆಗಾಗಿ ಇನ್ನೂ 40 ಬೆಡ್ ಮೀಸಲಿಟ್ಟಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ಗಳು ಭರ್ತಿಯಾಗಿ, ಅಲ್ಲಿಂದ ಸೋಂಕಿತರನ್ನು ರೆಫರ್ ಮಾಡಿದ್ದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಅಪಘಾತ ಸೇರಿದಂತೆ ಕೋವಿಡೇತರ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಶೇಖರ ಸೇಡಂಕರ್ ಮಾಹಿತಿ ನೀಡಿದರು.
ಕೋವಿಡ್ ಅಲ್ಲದ ರೋಗಿಗಳು ಯಾವುದೇ ಭಯ ಇಲ್ಲದೆ ಚಿಕಿತ್ಸೆ ಪಡೆಯಬಹುದು.ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಐಎಂಎ ಅಧ್ಯಕ್ಷ ಡಾ. ವಿ.ವಿ. ನಾಗರಾಜ, ಡಾ. ಖಾಜಾ, ಎಂಎಸ್ಐಎಲ್ ನಿರ್ದೇಶಕ ಬಾಬು ವಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಆದೀಶ ವಾಲಿ, ವೈದ್ಯ ಡಾ. ಖಾಜಾ ಮೈನುದ್ದಿನ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.