ADVERTISEMENT

ಧರ್ಮ ಸಮನ್ವಯತೆ ಬದುಕಿನ ಅಂತಃಶಕ್ತಿಯಾಗಲಿ

ಸಂವಾದದಲ್ಲಿ ಸಾಹಿತಿ ಶಾಂತಮ್ಮ ಬಲ್ಲೂರ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:49 IST
Last Updated 27 ಜನವರಿ 2021, 15:49 IST
ಬೀದರ್‌ನಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಶಾಂತಮ್ಮ ಬಲ್ಲೂರ ದಂಪತಿಯನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಶಾಂತಮ್ಮ ಬಲ್ಲೂರ ದಂಪತಿಯನ್ನು ಸನ್ಮಾನಿಸಲಾಯಿತು   

ಬೀದರ್: ಬಹು ಸಂಸ್ಕೃತಿಯ ನೆಲದಲ್ಲಿ ಧರ್ಮ ಸಮನ್ವಯತೆ ನಮ್ಮ ಬದುಕಿನ ಅಂತಃಶಕ್ತಿಯಾಗಬೇಕು ಎಂದು ಸಾಹಿತಿ ಶಾಂತಮ್ಮ ಬಲ್ಲೂರ ನುಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿಯ ಶಾಂತಮ್ಮ ಬಲ್ಲೂರ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಸಿ ಸೊಗಡಿನಲ್ಲಿ ಬೆಳೆದ ಕಾರಣ ಜಾನಪದ ಕಥೆ, ಕಾವ್ಯ ಮೊದಲಾದವು ತಮ್ಮ ಮೇಲೆ ದಟ್ಟ ಪ್ರಭಾವ ಬೀರಿದವು. ಅವೇ ತಮ್ಮ ಸಾಹಿತ್ಯದ ಬೆಳವಣಿಗೆಗೆ ಕಾರಣವಾದವು ಎಂದು ತಿಳಿಸಿದರು.

ADVERTISEMENT

ಯಶೋದಮ್ಮ ಸಿದ್ದಬಟ್ಟೆ ಕಾವ್ಯ ರಚನೆಗೆ ಪ್ರೋತ್ಸಾಹಿಸಿದರು. ಹಂಶ ಕವಿ ಸಾಹಿತ್ಯ ಪ್ರಕಟಣೆಗೆ ನೆರವಾದರು. ಸಹೋದರರು ಹಾಗೂ ಗಂಡನ ಮನೆಯವರು ತಮ್ಮ ಬೆಳವಣಿಗೆ ಹಿಂದೆ ಬೆಳಕಾಗಿ ನಿಂತರು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಮಾತನಾಡಿ, ಆಧುನಿಕತೆ ಕಾರಣ ಕೌಟುಂಬಿಕ ವಿಘಟನೆಗಳು ಹೆಚ್ಚಾಗುತ್ತಿವೆ. ಎಲ್ಲರನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಾಹಿತ್ಯ ಜೀವನ ಪ್ರೀತಿ ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸುಮತಿ ಎಸ್. ರುದ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ. ಅರುಣಾ ಸುಲ್ತಾನಪುರೆ ಹಾಗೂ ಕಾವ್ಯನಂದಿನಿ ಸಿಂಧೆ ಸಂವಾದ ನಡೆಸಿಕೊಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿಗಳಾದ ಡಾ. ಈಶ್ವರಯ್ಯ ಕೋಡಂಬಲ, ಶಿರೋಮಣಿ ತಾರೆ, ಮಲ್ಲಮ್ಮ ಉದಯಗಿರಿ, ವಿದ್ಯಾವತಿ ಬಲ್ಲೂರ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಜನಪದ ಗೀತೆಗಳನ್ನು ಹಾಡಿದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಪ್ರೊ. ಜಗನ್ನಾಥ ಕಮಲಾಪುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.