ಬೀದರ್: ‘ವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಾನು ಮೊದಲ ಸಾಲಿನಲ್ಲಿ ಇರುತ್ತೇನೆ’ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಮಹೇಶ ಜೋಶಿ ಪ್ರತಿಕ್ರಿಯಿಸಿದರು.
‘ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಖಂಡನೀಯ. ನಾಡು, ನುಡಿ ಹಾಗೂ ಜಲ ರಕ್ಷಣೆಯ ವಿಷಯ ಬಂದಾಗ ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ನಗರದಲ್ಲಿ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿದರು.
‘ಪೊಲೀಸರಿರಲಿ, ಸರ್ಕಾರದ ಇರಲಿ, ಇನ್ನಾರೋ ಇರಲಿ ತಪ್ಪು ಮಾಡಿದರೆ ಖಂಡಿಸಲೇ ಬೇಕಾಗುತ್ತದೆ’ ಎಂದು ಹೇಳಿದರು.
‘ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತಪ್ಪು ಮಾಡುತ್ತಿದೆ. ಯಾವ ಸಮಸ್ಯೆಗೂ ಹಿಂಸೆಯಿಂದ ಪರಿಹಾರ ದೊರಕದು. ಪ್ರೀತಿ ಹಾಗೂ ವಿಶ್ವಾಸದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.
‘ಮುಂಬೈನಲ್ಲಿ ಅನೇಕ ಕನ್ನಡಿಗರು ನೆಲೆಸಿದ್ದಾರೆ. ಈಗ ಅವರು ಅಲ್ಲಿಯವರೇ ಆಗಿದ್ದಾರೆ. ಅದರಂತೆ ಬೆಳಗಾವಿಯಲ್ಲಿ ನೆಲೆಸಿರುವವರೆಲ್ಲರೂ ಕನ್ನಡಿಗರೇ ಆಗಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.