ಬೀದರ್: ‘ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಮಾರ್ಕೆಟ್ ಠಾಣೆಯ ಪಿಎಸ್ಐ ಸಂಗೀತಾ ಎಸ್ ಹೇಳಿದರು.
ಇಲ್ಲಿಯ ಮಂಗಲಪೇಟೆ ಭವಾನಿ ಮಂದಿರದ ಆವರಣದಲ್ಲಿ ಮಾರ್ಕೆಟ್ ಠಾಣೆಯ ವತಿಯಿಂದ ಆಯೋಜಿಸಿದ್ದ
ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೀರ್ಘಕಾಲದ ಡ್ರಗ್ ಸೇವನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಗೆ ಧಕ್ಕೆ ಉಂಟು ಮಾಡುತ್ತದೆ. ಮಾದಕ ದ್ರವ ಅಥವಾ ವಸ್ತುಗಳ ದೀರ್ಘಕಾಲದ ಸೇವನೆಯಿಂದ ಮಿದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗೆ ಒಳಗಾಗಬಹುದು’ ಎಂದು ಎಚ್ಚರಿಸಿದರು.
‘ಯಾವುದೇ ವ್ಯಕ್ತಿಯು ಒಮ್ಮೆ ಚಟಕ್ಕೆ ಅಂಟಿಕೊಂಡರೆ ಸುಲಭವಾಗಿ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುವ ವ್ಯಸನವು ಪ್ರಾಣಕ್ಕೂ ಸಂಚಕಾರಿ ಎನ್ನುವುದನ್ನು ಅರಿಯುವ ವೇಳೆಗೆ ಅಪಾಯದ ಮಟ್ಟ ಮೀರಿರುತ್ತದೆ. ಆದ್ದರಿಂದ ಮಾದಕ ದ್ರವ ಸೇವನೆ ಮಾಡದಿರುವುದು ಒಳಿತು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ರಾಜಕುಮಾರ, ಬಾಪುರಾಯ್, ಮಂಗಲಪೇಟೆಯ ಪ್ರಮುಖರಾದ ದಯಾನಂದ ಸ್ವಾಮಿ, ಚಾಂದಪಾಶಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.