ಬೀದರ್: ಅಖಿಲ ಭಾರತೀಯ ಅಂಚೆ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷೆಯಾಗಿ ಮಂಗಲಾ ಭಾಗವತ್ ಆಯ್ಕೆಯಾಗಿದ್ದಾರೆ.
ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಸಮೀಪದ ಹೋಟೆಲ್ ಕನಕಾದ್ರಿ ಕಂಫರ್ಟ್ನಲ್ಲಿ ನಡೆದ ಅಖಿಲ ಭಾರತೀಯ ಅಂಚೆ ನೌಕರರ ಸಂಘದ ವಿಭಾಗೀಯ ದ್ವೈವಾರ್ಷಿಕ ಅಧಿವೇಶನದಲ್ಲಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಲ್ಲಿ ವಿಜಯಕುಮಾರ ಬಿ(ಉಪಾಧ್ಯಕ್ಷ), ಕಲ್ಲಪ್ಪ ಕೋಣಿ (ಕಾರ್ಯದರ್ಶಿ), ಚಿದಾನಂದ ಕಟ್ಟಿ (ಸಹ ಕಾರ್ಯದರ್ಶಿ), ಸುಭಾಷ ದೊಡ್ಡಿ (ಖಜಾಂಚಿ) ಸೇರಿದ್ದಾರೆ.
ಟ್ರೇಡ್ ಯೂನಿಯನ್ ಅಗತ್ಯ:
ಅಖಿಲ ಭಾರತೀಯ ಅಂಚೆ ನೌಕರರ ಸಂಘದ ವಿಭಾಗೀಯ ದ್ವೈವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಬಸವರಾಜ ಮಾಳಗೆ, ನೌಕರರ ಹಕ್ಕು, ಯೋಗ ಕ್ಷೇಮ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಟ್ರೇಡ್ ಯುನಿಯನ್ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಜಿಲ್ಲಾ ಘಟಕದ ನಿರ್ಗಮಿತ ಕಾರ್ಯದರ್ಶಿ ಗುಣವಂತ ಶಿಂಧೆ ಮಾತನಾಡಿ, ನವದೆಹಲಿಯ ಅಖಿಲ ಭಾರತೀಯ ಅಂಚೆ ನೌಕರರ ಸಂಘವು ಅಂಚೆ ಇಲಾಖೆಯ ಅತಿದೊಡ್ಡ ಸಂಘಟನೆಯಾಗಿದೆ. ಕಲ್ಯಾಣ ಕರ್ನಾಟಕದಿಂದ ಮೊದಲ ಬಾರಿಗೆ ಮಂಗಲಾ ಭಾಗವತ್ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಆಯ್ಕೆಯಾಗಿರುವುದು ಈ ಭಾಗದ ನೌಕರರಿಗೆ ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ನವದೆಹಲಿಯಲ್ಲಿ ಇರುವ ಅಖಿಲ ಭಾರತೀಯ ಅಂಚೆ ನೌಕರರ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಮಂಗಲಾ ಭಾಗವತ್ ಮಾತನಾಡಿ, ಸಂಘಟನೆ ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರೂ ಒಂದೇ ಎಂಬ ಭಾವ ಬೆಳೆಸುತ್ತದೆ. ಎಲ್ಲ ಸಮಸ್ಯೆಗಳಿಗೂ ವಿರೋಧವೊಂದೇ ಪರಿಹಾರ ಅಲ್ಲ. ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಈಡೇರಿಸಿಕೊಳ್ಳೊಣ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿ, ಅಂಚೆ ಇಲಾಖೆಗೆ ಕೀರ್ತಿ ತರೋಣ ಎಂದರು.
ಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಕ್ಕೆ ಮಂಗಲಾ ಭಾಗವತ್ ಅವರನ್ನು ವಿವಿಧ ಸಂಘಟನೆಗಳಿಂದ ಸನ್ಮಾನಿಸಲಾಯಿತು
ಸಂಘದ ಕೃಷ್ಣ ಮಣ್ಣೂರ, ಸುನೀಲಕುಮಾರ, ಶ್ರೀನಿವಾಸ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.