ಬೀದರ್: ರಾಜ್ಯದಲ್ಲಿ ಮರಾಠ ಸಮಾಜವನ್ನು 2ಎಗೆ ಸೇರ್ಪಡೆ ಮಾಡಬೇಕೆಂದು ಮರಾಠ ಕ್ರಾಂತಿ ಮೋರ್ಚಾ ರಾಜ್ಯ ಸಂಘಟಕ ನಾರಾಯಣ ಗಣೇಶ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.
ಮರಾಠ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಈ ಸಮಾಜಕ್ಕಿಂತ ಬಲಿಷ್ಠ ಸಮುದಾಯದವರು 2ಎಗೇ ಸೇರಿದ್ದಾರೆ. ಇದರಿಂದ ಮರಾಠರಿಗೆ ಅನ್ಯಾಯವಾಗುತ್ತಿದೆ. ಈ ಹಿಂದೆ ಜಾತಿ ಜನಗಣತಿ ಬಳಿಕ ನಮ್ಮ ಬೇಡಿಕೆಗೆ ಗಮನ ಹರಿಸಲಾಗುವುದು ಎಂದು ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ, ಇನ್ನೂ ಈಡೇರಿಲ್ಲ ಎಂದರು.
ರಾಜ್ಯದಲ್ಲಿ 16 ಲಕ್ಷ ಮರಾಠ ಸಮಾಜದವರು ಇದ್ದಾರೆ. 2ಎಗೆ ಸೇರಿಸುವುದು ಸೂಕ್ತ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಲೇ 2ಎಗೆ ಸೇರಿಸಿ ಮರಾಠರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.
ಮರಾಠ ಕ್ರಾಂತಿ ಮೋರ್ಚಾ ಪ್ರಮುಖರಾದ ಶಿವಾಜಿರಾವ ಪಾಟೀಲ ಮುಂಗನಾಳ, ಬಾಲಾಜಿ ಬಿರಾದಾರ ಗಣೇಶಪುರ, ವೆಂಕಟ ಚಿದ್ರೆ, ಪ್ರದೀಪ ಬಿರಾದಾರ, ರಂಜೀತ್ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.