ಬೀದರ್: ಆನೆಕಾಲು ರೋಗ ನಿರ್ಮೂಲನೆಗೆ ಜಿಲ್ಲೆಯಲ್ಲಿ ಈ ಬಾರಿ ನಡೆಯಲಿರುವ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮದಲ್ಲಿ ಡಿಇಸಿ, ಅಲ್ಬೆಂಡ್ಜೋಲ್ ಮಾತ್ರೆ ಜತೆಗೆ ಐವರ್ಮೆಕ್ಟಿನ್ ಮಾತ್ರೆಯನ್ನೂ ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಆನೆಕಾಲು ರೋಗ ನಿರ್ಮೂಲನೆಗೆ 17ನೇ ಸುತ್ತಿನ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ ಪ್ರಯುಕ್ತ ವೈದ್ಯಾಧಿಕಾರಿಗಳಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಾರ್ಚ್ 15 ರಿಂದ 31 ರ ವರೆಗೆ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮ ನಡೆಯಲಿದೆ. ಪ್ರತಿ 25 ಮನೆಗಳಿಗೆ ತಲಾ ಇಬ್ಬರು ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರು ಭೇಟಿ ಕೊಟ್ಟು ಮಾತ್ರೆ ಸೇವನೆ ಮಾಡಿಸಲಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷ ಸಾಮೂಹಿಕ ಮಾತ್ರೆ ಸೇವನೆ ಮಾಡಿಸುತ್ತಲೇ ಬರಲಾಗಿದೆ. ಆದರೂ, ಜಿಲ್ಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆ ಆಗದಿರುವುದು ವಿಷಾದದ ಸಂಗತಿಯಾಗಿದೆ ಎಂdಉ ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಮಾತನಾಡಿ, ಮಾರ್ಚ್ 1 ರಿಂದ 31 ರ ವರೆಗೆ ಸಕ್ರಿಯ ಕಾರ್ಯಕ್ರಮ ಹಾಗೂ ಏಪ್ರಿಲ್ 1 ರಿಂದ 15 ರ ವರೆಗೆ ಮಾಪ್ ಅಪ್ ಚಟುವಟಿಕೆ ಜರುಗಲಿವೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರೂ ಔಷಧಿ ಸೇವಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ರೈಲು ನಿಲ್ದಾಣ, ಬಸ್ ನಿಲ್ದಾಣ, ವಲಸೆ ಕಾರ್ಮಿಕರ ಶಿಬಿರಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿಯನ್ನು ನಿಯೋಜಿಸಿ ಔಷಧಿ ಸೇವನೆ ಮಾಡಿಸಬೇಕು. ಪಲ್ಸ್ ಪೋಲಿಯೊ ಮಾದರಿಯಲ್ಲಿ ಔಷಧಿ ಸೇವಿಸಿದವರ ಕೈ ಬೆರಳಿಗೆ ಶಾಯಿ ಗುರುತು ಹಾಕಬೇಕು ಎಂದು ಹೇಳಿದರು.
ಕಾರವಾರದ ವಿಷಯ ತಜ್ಞೆ ಜ್ಯೋತ್ಸ್ನಾ ಆನೆಕಾಲು ರೋಗದ ಆರೈಕೆ ಕುರಿತು ಮಾಹಿತಿ ನೀಡಿದರು. ಯಾದಗಿರಿಯ ಆಶ್ರಿತ ರೋಗಗಳ ಜಿಲ್ಲಾ ಸಲಹೆಗಾರ ಬಸವರಾಜ ಕಾಂತಾ, ಡಾ. ಶಿವಶಂಕರ ಬಿ., ಡಾ. ಕೃಷ್ಣಾರೆಡ್ಡಿ, ಡಾ. ದೀಪಾ ಖಂಡ್ರೆ, ಡಾ. ಶಿವಕುಮಾರ ಸಿದ್ಧೇಶ್ವರ, ಡಾ. ಶಂಕರೆಪ್ಪ ಮೈಲಾರೆ, ಡಾ. ಶರಣಯ್ಯ ಸ್ವಾಮಿ ಇದ್ದರು. ರಾಜು ಕುಲಕರ್ಣಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.