ADVERTISEMENT

ಪಡಿತರಕ್ಕೆ ಕೊರತೆಯಿಲ್ಲ : ಸಚಿವ ಗೋಪಾಲಯ್ಯ

ಆಹಾರ ಸಚಿವ ಕೆ.ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 15:59 IST
Last Updated 10 ಜೂನ್ 2020, 15:59 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಮಾತನಾಡಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಮಾತನಾಡಿದರು   

ಬೀದರ್‌: ‘ಪಡಿತರಕ್ಕೆ ಕೊರತೆಯಿಲ್ಲ. ಜಿಲ್ಲೆಯಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಮತ್ತು ವಲಸಿಗ ಫಲಾನುಭವಿಗಳಿಗೆ ತಪ್ಪದೆ ಪಡಿತರ ವಿತರಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತು ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಪಡಿತರ ವಿತರಣೆ ಅನುಷ್ಠಾನದ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ ಬಗ್ಗೆ ಕಾಳಜಿ ವಹಿಸಿ ಏಪ್ರಿಲ್‌ನಲ್ಲಿ ಸಾಕಷ್ಟು ಪಡಿತರ ಕೊಟ್ಟಿವೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಸೇರಿದಂತೆ ಪಡಿತರ ಚೀಟಿ ಇಲ್ಲದವರಿಗೆ ಮತ್ತು ವಲಸಿಗರಿಗೆ ಸಮರ್ಪಕವಾಗಿ ಪಡಿತರ ತಲುಪಬೇಕು. ಪಡಿತರಕ್ಕೆ ಸರ್ಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ನಾವು ಕೊಡುವ ಆಹಾರ ಧಾನ್ಯಗಳು ಹೇಗಿವೆ ಎಂದು ನೋಡಲು ಪ್ರವಾಸ ನಡೆಸಿದ್ದೇನೆ. ಮಕ್ಕಳಿಗೆ ಕಳಪೆ ಆಹಾರ ಪೂರೈಸಿದರೆ ಸಹಿಸುವುದಿಲ್ಲ. ಎಲ್ಲಾದರೂ ಕಳಪೆ ಆಹಾರ ಧಾನ್ಯ ಪೂರೈಸುವುದು ಕಂಡು ಬಂದರೆ ತಮಗೆ ಮಾಹಿತಿ ಕೊಡಬೇಕು’ ಎಂದರು.

ADVERTISEMENT

ಬೀದರ್‌, ಕಲಬುರ್ಗಿ ಮತ್ತು ಯಾದಗಿರ ಭಾಗದಲ್ಲಿ ಪಡಿತರಕ್ಕೆ ನೀಡಿದ ಆಹಾರ ಧಾನ್ಯಗಳ ಅಕ್ರಮ ಮಾರಾಟ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಎಷ್ಟೇ ಪ್ರಭಾವಿ ಇರಲಿ, ಅಕ್ರಮವಾಗಿ ಪಡಿತರ ಧಾನ್ಯ ಸಾಗಣೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಬಹಳಷ್ಟು ದಿನಗಳ ಕಾಲ ಹಾಗೇ ಇರಿಸಿದ ಆಹಾರಧಾನ್ಯ ಮತ್ತು ಊಟಕ್ಕೆ ಬಳಸುವ ಎಣ್ಣೆಯನ್ನು ಶಾಲಾ ಮಕ್ಕಳಿಗೆ ವಿತರಿಸಬಾರದು. ಯಾವ ಯಾವ ಶಾಲೆಗಳಲ್ಲಿ ಇನ್ನೂ ಹಳೆಯ ಸ್ಟಾಕ್ ಇದೆ ಎನ್ನುವ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ಹೊಸದಾಗಿ ನೀಡಿದ ಆಹಾರ ಧಾನ್ಯಗಳನ್ನೇ ಶಾಲೆಗಳಲ್ಲಿ ಬಳಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.