ಬೀದರ್: ‘ಹೊನ್ನಿಕೇರಿ ಪರಿಸರ ಪ್ರವಾಸೋದ್ಯಮ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದ ಮೊದಲ ಯೋಜನೆಯಾಗಿದೆ. ಈ ಪ್ರವಾಸೋದ್ಯಮವು ಸಾರ್ವಜನಿಕರನ್ನು ಕೈಬಿಸಿ ಕರೆಯುವಂತಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್ಡಿಬಿ) ಯೋಜನೆಯಡಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣ್ಮಾತಕ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿ ಅವರು ಮಾತನಾಡಿದರು.
‘ಸುಮಾರು ₹15 ಕೋಟಿ ವೆಚ್ಚದಲ್ಲಿ ಹೊನ್ನಿಕೇರಿ ಪರಿಸರ ಪ್ರವಾಸೋದ್ಯಮ ಯೋಜನೆಯ ಕ್ರಿಯೆಯೋಜನೆಯನ್ನು ಸಿದ್ಧಪಡಿಸಲಾಗಿದೆ. ಕೆಕೆಆರ್ಡಿಬಿ ಯೋಜನೆಯಡಿಯಲ್ಲಿ ಸುಮಾರು ₹13.50 ಕೋಟಿ ಹಣವನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಈ ಕಾಮಗಾರಿಯಿಂದ ಸ್ಥಳೀಯರಿಗೆ ಹಲವು ಲಾಭಗಳು ದೊರೆಯಲಿವೆ’ ಎಂದು ಹೇಳಿದರು.
‘ಯೋಜನೆ ಅಡಿಯಲ್ಲಿ ಪ್ರವಾಸಿಗರಿಗಾಗಿ ಕಲ್ಯಾಣಿಗಳ ಪುನರ್ಚೇತನ, ದೋಣಿಯಲಿ ತರಗತಿ, ನಕ್ಷತ್ರ ವೀಕ್ಷಣೆ, ಕಾವಲು ಗೋಪುರ, ಮಾಹಿತಿ ಕೇಂದ್ರ, ಝರಿಗಳ ಪುನಶ್ಚೇತನ, ಶಿಬಿರದ ವಸತಿಗಳು ಸೇರಿದಂತೆ 5 ಕಿ.ಮೀ ಸೈಕ್ಲಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ವಿಭಾಗೀಯ ಅರಣ್ಯ ಅಧಿಕಾರಿ ವಾನತಿ ಎಂ.ಎಂ., ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ ಕನಕಟ್ಟಾ, ವಲಯ ಅರಣ್ಯಧಿಕಾರಿ ಮಹೇಂದ್ರಕುಮಾರ ಮೋರೆ, ವಿನಯಕುಮಾರ ಮಾಳಗೆ, ರಾಜಕುಮಾರ ಪಾಟೀಲ, ಸತೀಶಕುಮಾರ, ವಿಜಯಕುಮಾರ ಜಾಧವ, ಶ್ರೀಕಾಂತ ರಾಠೋಡ, ಸಂತೋಷ ಸುತಾರ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.