ಬೀದರ್: ಶಾಸಕ ರಹೀಂ ಖಾನ್ ಬೀದರ್ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು.
ಬೀದರ್ ತಾಲ್ಲೂಕಿನ ಮರಕಲ್, ದದ್ದಾಪುರದಲ್ಲಿ ಬೆಳೆ ಹಾನಿ ವೀಕ್ಷಿಸಿ ರೈತರ ಅಹವಾಲು ಆಲಿಸಿದರು.
ಭಾರಿ ಮಳೆ ಮತ್ತು ಗಾಳಿ ಬೀಸಿದ ಪರಿಣಾಮ ಬಿಳಿ ಜೋಳ, ಮಾವಿನಕಾಯಿ, ತರಕಾರಿ ಬೆಳೆಗಳು ಹಾಳಾಗಿವೆ ಎಂದು ರೈತರು ಹೇಳಿದರು.
ಬೆಳೆದು ನಿಂತಿರುವ ಬೆಳೆಗಳೆಲ್ಲವೂ ನೀರು ಪಾಲಾಗಿವೆ ಎಂದು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು.
ಶಾಸಕ ರಹೀಂ ಖಾನ್ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಮಳೆಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ ಅವರೂ ಸಹ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದರು. ಬೀದರ್ ತಹಶೀಲ್ದಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ, ತಾಲ್ಲೂಕು ಮಾಜಿ ಸದಸ್ಯ ಬಸವರಾಜ ಬುಯ್ಯ, ದೀಪಕ ಮರಕಲ್, ಚಂದ್ರಶೇಖರ ಇದ್ದರು.
ನಷ್ಟ ಪರಿಹಾರಕ್ಕೆ ಸೂರ್ಯಕಾಂತ ಆಗ್ರಹ:
ಬೀದರ್: ಆಲಿಕಲ್ಲು ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಆಗ್ರಹಿಸಿದರು.
ಆಲಿಕಲ್ಲು ಮಳೆ ಪೀಡಿತ ಮರಕಲ್ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿದ ಅವರು, ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಪ್ರಮುಖರಾದ ಚನ್ನಯ್ಯ ಸ್ವಾಮಿ, ಕಾಮಶೆಟ್ಟಿ ಬುಯ್ಯ, ರಮೇಶ ಬುಯ್ಯ, ಪ್ರಶಾಂತ ಬಿರಾದಾರ್, ಸತೀಶ ಪಾರಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.