ADVERTISEMENT

ನಾವೇನು ಬಳೆ ತೊಟ್ಟಿದ್ದೇವಾ? - ರಾಜಶೇಖರ ಪಾಟೀಲ

ಬಿಜೆಪಿ ವಿರುದ್ಧ ರಾಜಶೇಖರ ಪಾಟೀಲ ಗುಡುಗು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 15:38 IST
Last Updated 3 ಡಿಸೆಂಬರ್ 2021, 15:38 IST
ರಾಜಶೇಖರ ಪಾಟೀಲ
ರಾಜಶೇಖರ ಪಾಟೀಲ   

ಬೀದರ್: ‘ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದುಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇಲ್ಲೇನು ಜಗಳ ಆಡುವುದಿದೆಯಾ, ಹಾಗಾದರೆ ನಾವೇನು ಬಳೆ ತೊಟ್ಟಿದ್ದೇವಾ’ ಎಂದು ಶಾಸಕ ರಾಜಶೇಖರ ಪಾಟೀಲ ಪ್ರಶ್ನಿಸಿದರು.

ಇಲ್ಲಿಯ ಝೀರಾ ಫಂಕ್ಷನ್ ಹಾಲ್‍ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

‘ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ಜಮೀನು-ಆಕಾಶ ಎರಡೂ ಕಾಣುತ್ತಿಲ್ಲ. ನಮ್ಮ ತಂದೆ ಬಸವರಾಜ ಪಾಟೀಲ 1992 ಮತ್ತು 2002 ರಲ್ಲಿ ಎರಡು ಬಾರಿ ಸಚಿವರಾಗಿದ್ದರು. ನಾನು 2018 ರಲ್ಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಇವರಿಗೆ ಈಗ ಮಂತ್ರಿ ಪದವಿ ಸಿಕ್ಕಿದೆ’ ಎಂದು ಕುಟುಕಿದರು.

ADVERTISEMENT

‘ಎಲುಬಿಲ್ಲದ ನಾಲಿಗೆ ಎಂದು ಖೂಬಾ ಏನೇನೋ ಮಾತನಾಡುತ್ತಿದ್ದಾರೆ. ನಾನು, ಈಶ್ವರ ಖಂಡ್ರೆ ₹ 5 ಲಕ್ಷ ಬೆಲೆಯ ರೇಬಾನ್ ಕನ್ನಡಕ ಹಾಕಿಕೊಳ್ಳುತ್ತೇವೆ ಎಂದಿದ್ದಾರೆ. ಅವರು ₹ 50 ಸಾವಿರ ಕೊಡಲಿ, ಎಷ್ಟು ಬೇಕೋ, ಅಷ್ಟು ಮಂದಿಗೆ ಕನ್ನಡಕ ಕೊಡಿಸೋಣ’ ಎಂದು ಸವಾಲು ಹಾಕಿದರು.

’ಸಚಿವರಾಗಿ ಚವಾಣ್ ಅವರು 28 ತಿಂಗಳಲ್ಲಿ ಮಾಡಿದ ಸಾಧನೆ ಶೂನ್ಯ. ಇವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಕಾಲೇಜು ನಿರ್ದೇಶಕ ಸ್ಥಾನಕ್ಕೆ ಎಷ್ಟು ಹಣ ಪಡೆದಿದ್ದಾರೆ. ಪಿಡಬ್ಲ್ಯುಡಿ ಅಧಿಕಾರಿ ಹುದ್ದೆಗೆ ಏನು ಸೌದಾ ಆಗಿದೆ ಎನ್ನುವುದನ್ನು ಮುಂದೆ ಹೇಳುತ್ತೇನೆ. ಕೆಲವರು ನನ್ನ ತಂದೆಯವರ ಬಗ್ಗೆ ಮಾತನಾಡಿರುವುದು ಗಮನಕ್ಕೆ ಬಂದಿದೆ. ಧೈರ್ಯವಿದ್ದರೆ ನನ್ನ, ನನ್ನ ಸಹೋದರರ ಬಗ್ಗೆ ಮಾತನಾಡಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.