ADVERTISEMENT

ಯುವಕನ ಕೊಲೆ: ಐವರಿಗೆ 10 ವರ್ಷ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:30 IST
Last Updated 10 ಏಪ್ರಿಲ್ 2019, 16:30 IST

ಬೀದರ್: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಮಾಡಿದ ಆರೋಪದ ಮೇಲೆ ಐವರಿಗೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ವಿವಿಧ ಪ್ರಕರಣಗಳ ಅಡಿಯಲ್ಲಿ ₹16,500 ದಂಡ ಹಾಗೂ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಹುಮನಾಬಾದ್‌ ತಾಲ್ಲೂಕಿನ ಚಾಂಗಲೇರಾದ ಮಲ್ಲಪ್ಪ ಸೂರಪ್ಪ ಪೂಜಾರಿ, ಜಗನ್ನಾಥ ಚಂದ್ರಪ್ಪ ಪೂಜಾರಿ, ರಾಜಪ್ಪ ಸೂರಪ್ಪ ಪೂಜಾರಿ, ಜಗನ್ನಾಥ ಮಲ್ಲಿಕಾರ್ಜುನ ಭೈರಿ, ದಶರಥ ಅಲಿಯಾಸ್ ಪ್ರದೀಪ ಶಾಮರಾವ್, ಜೀತನಗೆ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಚಂದ್ರಶೇಖರ ರೆಡ್ಡಿ ತೀರ್ಪು ನೀಡಿದ್ದಾರೆ.

ಚಾಂಗಲೇರಾದ ವೀರೇಂದ್ರಕುಮಾರ ಸಹೋದರಿಯನ್ನು ಬೇರೆ ಸಮುದಾಯದ ದೇವಿಂದ್ರಪ್ಪ ಪೂಜಾರಿ ಪ್ರೀತಿಸಿ ಮದುವೆಯಾಗಿದ್ದ. ವೀರೇಂದ್ರಕುಮಾರಗೆ ಮಲ್ಲಪ್ಪ ಪೂಜಾರಿ, ಹಾಗೂ ಜಗನ್ನಾಥ ಪೂಜಾರಿಯೊಂದಿಗೆ ಮಧ್ಯ ಜಗಳವಾಗಿತ್ತು.

ADVERTISEMENT

2016ರ ಮೇ 27ರಂದು ವೀರೇಂದ್ರಕುಮಾರನ ಸಹೋದರ ಅಶೋಕ ಶರಣಪ್ಪ ಬೇಡರ ತನ್ನ ಗೆಳೆಯರೊಂದಿಗೆ ಮನೆಯ ಕಟ್ಟೆಯ ಮೇಲೆ ಕುಳಿತಿದ್ದಾಗ ಆರೋಪಿಗಳು ಅಶೋಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಂತರ ಮಾತಿನ ಚಕಮಕಿ ನಡೆದು ಆರೋಪಿಗಳು ಬಡಿಗೆಯಿಂದ ಬಲವಾಗಿ ಅಶೋಕನ ತಲೆ ಹಾಗೂ ಮೂಗಿನ ಮೇಲೆ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು.

ಬೇಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಭೀಮಾಶಂಕರ ಅಂಬಲಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.