ಬೀದರ್: ಇಲ್ಲಿಯ ವಿದ್ಯಾನಗರ ಕಾಲೊನಿಯ ಎಂಜಿನಿಯರ್ ದೀಪಕ ದಿಲ್ಲೆ ಮತ್ತು ಪ್ರಭಾವತಿ ನೇತೃತ್ವದಲ್ಲಿ ಆರಂಭಿಸಲಾಗಿರುವ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯ ‘ಅವನಿ ಟೆಕ್ನಾಲಾಜಿಸ್ಟ್’ ಉದ್ಯಮಕ್ಕೆ ಬುದ್ಧ ಪೂರ್ಣಿಮೆಯ ದಿನ ಚಾಲನೆ ನೀಡಲಾಯಿತು.
ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಬೀದರ್ನ ಎಂಜಿನಿಯರ್ ದೀಪಕ ದಿಲ್ಲೆ ಆತ್ಮವಿಶ್ವಾಸದೊಂದಿಗೆ ನಗರದಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಈ ಉದ್ಯಮವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋದರೆ ಇನ್ನುಳಿದವರಿಗೂ ಉದ್ಯೋಗ ದೊರೆಯಲಿದೆ. ಅವರು ಈ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.
ಉದ್ಯಮ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ರಹೀಂ ಖಾನ್ ಮಾತನಾಡಿ, ಬಡ ಕುಟುಂಬದ ದೀಪಕ ದಿಲ್ಲೆ ಮತ್ತು ಪ್ರಭಾವತಿ ಅವರು ಪ್ಲಾಸ್ಟಿಕ್ ತ್ಯಾಜ್ಯ ಬಳಸಿಕೊಂಡು ಹೊಸ ಉತ್ಪನ್ನ ತಯಾರಿಸುವ ಘಟಕ ಆರಂಭಿಸಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಮೂಲಕ ದೀಪಕ ದಿಲ್ಲೆ ಅವರಿಗೆ ಎರಡು ಎಕರೆ ಜಮೀನು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಅವನಿ ಟೆಕ್ನಾಲಾಜಿ ಸಿಇಒ ದೀಪಕ ದಿಲ್ಲೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ನಗರಸಭೆ ಸದಸ್ಯ ಸೌದ್ ಶೇರಿಕಾರ್, ಗಾಂಧಿಗಂಜ್ ಸಿಪಿಐ ಜಿ.ಎಸ್. ಬಿರಾದಾರ, ಬುದ್ಧ ಪ್ರಕಾಶ ಭಾವಿಕಟ್ಟಿ, ಪಾಂಡುರಂಗ ಕಾಂತಿಮನಿ, ರಾಜಕುಮಾರ, ಅರುಣ ಪಟೇಲ್ ಇದ್ದರು. ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.