ADVERTISEMENT

ನಿರ್ಮಾಣ ಭಾರತಿ: ಎರಡು ಹೊಸ ಶಾಖೆ ಶುರು

ಚಿನ್ನ ಖರೀದಿ ಸಾಲ ಯೋಜನೆಗೆ ಗ್ರಾಹಕರ ಮೆಚ್ಚುಗೆ: ಮಠ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:24 IST
Last Updated 22 ನವೆಂಬರ್ 2020, 5:24 IST
ನಿರ್ಮಾಣ ಭಾರತಿ ವಿವಿಧೊದ್ದೇಶ ಸಹಕಾರ ಸಂಘದ ಬಸವಕಲ್ಯಾಣ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಸಿಇಒ ವಿಜಯಲಕ್ಷ್ಮಿ ಮಠ ಅವರು ನಗರಸಭೆ ಅಧ್ಯಕ್ಷೆ ನಹೀದಾ ಸುಲ್ತಾನಾ ಅವರನ್ನು ಸನ್ಮಾನಿಸಿದರು
ನಿರ್ಮಾಣ ಭಾರತಿ ವಿವಿಧೊದ್ದೇಶ ಸಹಕಾರ ಸಂಘದ ಬಸವಕಲ್ಯಾಣ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಸಿಇಒ ವಿಜಯಲಕ್ಷ್ಮಿ ಮಠ ಅವರು ನಗರಸಭೆ ಅಧ್ಯಕ್ಷೆ ನಹೀದಾ ಸುಲ್ತಾನಾ ಅವರನ್ನು ಸನ್ಮಾನಿಸಿದರು   

ಬೀದರ್: ಇಲ್ಲಿಯ ನಿರ್ಮಾಣ ಭಾರತಿ ವಿವಿಧೊದ್ದೇಶ ಸಹಕಾರ ಸಂಘ ನಿಯಮಿತವು ಜಿಲ್ಲೆಯಲ್ಲಿ ಇನ್ನೂ ಎರಡು ಹೊಸ ಶಾಖೆಗಳನ್ನು ಶುರು ಮಾಡಿದೆ. ಬಸವಕಲ್ಯಾಣ ಹಾಗೂ ಚಿಟಗುಪ್ಪ ಶಾಖೆಗಳ ಆರಂಭದೊಂದಿಗೆ ಸಂಘದ ಒಟ್ಟು ಶಾಖೆಗಳ ಸಂಖ್ಯೆ ಏಳಕ್ಕೆ ಏರಿದೆ.

ಬಸವಕಲ್ಯಾಣದಲ್ಲಿ ನಡೆದ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ ಮಠ ಅವರು, ‘ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಶಾಖೆಗಳನ್ನು ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

‘ಸಂಘವು ಬೀದರ್ ನಗರದಲ್ಲಿ ಎರಡು, ಬಸವಕಲ್ಯಾಣ ಮೂರು, ಕಮಠಾಣ ಗ್ರಾಮ ಹಾಗೂ ಚಿಟಗುಪ್ಪ ಪಟ್ಟಣದಲ್ಲಿ ತಲಾ ಒಂದು ಶಾಖೆ ಹೊಂದಿದೆ. ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕರ ಸಹಕಾರದಿಂದಾಗಿ 15 ವರ್ಷಗಳ ಅವಧಿಯಲ್ಲಿ ಸಂಘ ಗಣನೀಯ ಸಾಧನೆ ಮಾಡಿದೆ’ ಎಂದು ಹೇಳಿದರು.

ADVERTISEMENT

‘ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ, ಶಿಕ್ಷಣ, ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸಂಘ ಬಡಜನರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ. ಸಂಘ ಜಾರಿಗೆ ತಂದಿರುವ ಸಾಲ ಯೋಜನೆಗಳಲ್ಲಿ ಸದಸ್ಯರಿಗೆ ಚಿನ್ನ ಖರೀದಿಗೆ ಶೇ 80 ರಷ್ಟು ಸಾಲ ಕೊಡುವ ವಿನೂತನ ಯೋಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ತಿಳಿಸಿದರು.

‘ಸಂಘದಲ್ಲಿ ಎಲ್ಲ ರೀತಿಯ ಉಳಿತಾಯ ಖಾತೆ, ಠೇವಣಿಗಳಿಗೆ ಆಕರ್ಷಕ ಬಡ್ಡಿ ಕೊಡಲಾಗುತ್ತಿದೆ. ಅನೇಕ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಉತ್ತಮ ಸೇವೆ ಸಲ್ಲಿಸಿದ ಸಂಘದ ಸಿಬ್ಬಂದಿ ಹಾಗೂ ಸಕಾಲಕ್ಕೆ ಸಾಲ ಮರು ಪಾವತಿಸಿದ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ನಹೀದಾ ಸುಲ್ತಾನಾ ಉದ್ಘಾಟಿಸಿದರು. ಆಯುಕ್ತ ಗೌತಮ ಕಾಂಬಳೆ, ಬೀದರ್ ನಗರ ಅಭಿವೃದ್ಧಿ ಯೋಜನಾ ಕೋಶದ ನಿವೃತ್ತ ನಿರ್ದೇಶಕ ಬಲಭೀಮ ಕಾಂಬಳೆ, ಕಮಲನಗರದ ಪ್ರಿಯದರ್ಶಿನಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಸವರಾಜ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.