ADVERTISEMENT

ವಾಹನ ನಿಲುಗಡೆಗೆ ಆಕ್ಷೇಪ: ಎಪಿಎಂಸಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 16:03 IST
Last Updated 2 ನವೆಂಬರ್ 2020, 16:03 IST
ರೈತ ಭವನದ ಎದುರು ವಾಹನಗಳ ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅಂಗಡಿಯವರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ರೈತ ಭವನದ ಎದುರು ವಾಹನಗಳ ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅಂಗಡಿಯವರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಬೀದರ್: ಇಲ್ಲಿಯ ಗಾಂಧಿಗಂಜ್‍ನಲ್ಲಿ ಇರುವ ರೈತ ಭವನದ ಆವರಣದಲ್ಲಿ ವಾಹನಗಳ ನಿಲುಗಡೆಗೆ ಪಕ್ಕದ ಅಂಗಡಿಯವರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ಕಾರ್ಯಕರ್ತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.

ಜಿಲ್ಲಾ ಘಟಕದ ಮಾಸಿಕ ಸಭೆ ನಡೆಯಲಿದ್ದ ಕಾರಣ ರೈತ ಸಂಘದ ಪದಾಧಿಕಾರಿಗಳು ರೈತ ಭವನಕ್ಕೆ ಬಂದಿದ್ದರು. ಕೆಲವರು ಭವನದ ಆವರಣದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ನಿಲುಗಡೆ ಮಾಡಿ ಒಳಗೆ ಹೋಗಲು ಮುಂದಾದಾಗ, ಪಕ್ಕದ ಅಂಗಡಿಯವರು ತಗಾದೆ ತೆಗೆದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು ಮೆಸರ್ಸ್ ರಾಘವೇಂದ್ರ ಇಂಡಸ್ಟ್ರೀಸ್‍ನವರು ರೈತ ಭವನದ ಆವರಣದ ಕಡೆ ಬಾಗಿಲು ತೆಗೆದದ್ದೇ ತಪ್ಪು. ಅವರು ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಅವರ ಅಂಗಡಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾರ್ಯಕರ್ತರೊಂದಿಗೆ ಎಪಿಎಂಸಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ವಿಷಯವನ್ನು ಎಪಿಎಂಸಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಹಾಗೂ ಕಾರ್ಯದರ್ಶಿ ಅವರ ಗಮನಕ್ಕೆ ತಂದರು.

ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಎಪಿಎಂಸಿ ಸೂಚನೆ ಮೇರೆಗೆ ಅಂಗಡಿಯವರು ಬಾಗಿಲು ಮುಚ್ಚಿಕೊಂಡರು. ನಂತರ ಮಾಸಿಕ ಸಭೆಗೆ ತೆರಳಿದೇವು ಎಂದು ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.