ಬೀದರ್: ಮಕ್ಕಳಿಗೆ ವಿವಿಧ ಕಲೆಗಳ ತರಬೇತಿ ನೀಡಲು ತಾಲ್ಲೂಕು ಮಟ್ಟದಲ್ಲೂ ಬೇಸಿಗೆ ಶಿಬಿರ ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಎಸ್. ರತ್ನಾಕರ್ ಹೇಳಿದರು.
ರಾಜ್ಯ ಬಾಲ ಭವನ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ನಗರದ ಬಾಲ ಭವನದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಕಾರಣ ಎರಡು ವರ್ಷ ಬೇಸಿಗೆ ಶಿಬಿರಗಳನ್ನು ರದ್ದುಪಡಿಸಲಾಗಿತ್ತು. ಈ ವರ್ಷ ಮತ್ತೆ ಶುರು ಮಾಡಲಾಗಿದೆ. ಬೇಸಿಗೆ ಶಿಬಿರಗಳು ಮಕ್ಕಳಿಗೆ ವಿವಿಧ ಕಲೆಗಳನ್ನು ಕಲಿಯಲು ಸಹಕಾರಿಯಾಗಿವೆ ಎಂದು ತಿಳಿಸಿದರು.
ಬಾಲ ಭವನ ಸಮಿತಿಯ ಕಾರ್ಯಕ್ರಮ ಸಂಯೋಜಕ ಸೂರ್ಯಕಾಂತ ಮೋರೆ ಮಾತನಾಡಿ, ಮೇ 6 ರ ವರೆಗೆ ಪ್ರತಿ ದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ಶಿಬಿರ ನಡೆಯಲಿದೆ ಎಂದು ಹೇಳಿದರು.
ಶಿಬಿರದಲ್ಲಿ ಪರಿಣಿತರು ಮಕ್ಕಳಿಗೆ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಯೋಗಾಸನ, ಕರಾಟೆ, ಸಮೂಹ ನೃತ್ಯ, ಸಮೂಹ ಸಂಗೀತ, ಕಸೂತಿ, ಮೆಹಂದಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಡಾ. ಧನಲಕ್ಷ್ಮಿ ಪಾಟೀಲ, ಮಂಜುಳಾ ಎಂ. ಮಾತನಾಡಿದರು.
ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ, ಕಸೂತಿ ತರಬೇತಿಗಾರ್ತಿ ಸುಮಲತಾ ದೇವೇಂದ್ರ ಮಾಳಗೆ, ಜಾನಪದ ಕಲಾವಿದ ಶೇಷಪ್ಪ ಚಿಟ್ಟಾ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಮನ್ನಳ್ಳಿ, ಅಂಬಿಕಾ ಉಪಸ್ಥಿತರಿದ್ದರು.
ಬಾಲಭವನ ಕಚೇರಿಯ ಸಹಾಯಕ ಸುವಿತ್ ಎಸ್. ಮೋರೆ ವಂದಿಸಿದರು. 60 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.