ADVERTISEMENT

ಸಾರಸ್ವತ ಲೋಕಕ್ಕೆ ಫ.ಗು ಹಳಕಟ್ಟಿ ಸೇವೆ ಅನನ್ಯ

ಬಸವೋತ್ಸವ ಕಾರ್ಯಕ್ರಮದಲ್ಲಿ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ರಮೇಶ ಮಠಪತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮೇ 2022, 11:10 IST
Last Updated 20 ಮೇ 2022, 11:10 IST

ಗೋರ್ಟಾ(ಬಿ) (ಹುಲಸೂರ): ‘ಫ.ಗು ಹಳಕಟ್ಟಿಯವರು ಸರಳ ಜೀವನ, ಉದಾತ್ತ ಚಿಂತನೆ ಮತ್ತು ಅದ್ಭುತ ಕಾರ್ಯಗಳ ಸಂಗಮವಾಗಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ’ ಎಂದು ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ರಮೇಶ ಮಠಪತಿ ಹೇಳಿದರು.

ಗೋರ್ಟಾ(ಬಿ) ಗ್ರಾಮದ ಲಿಂಗಾಯತ ಮಹಾಮಠದಲ್ಲಿ ನಡೆದ ಬಸವೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫ.ಗು ಹಳಕಟ್ಟಿ ಅವರ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಹಳಕಟ್ಟಿ ಅವರು ವಚನ ಸಾಹಿತ್ಯ ಪ್ರಕಟಣೆಗಾಗಿ ತಮ್ಮ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದರು. ಬಡತನವನ್ನು ಅಪ್ಪಿ ನೋವುಗಳನ್ನು ನುಂಗಿ ಕನ್ನಡ ಮತ್ತು ವಚನ ಸಾಹಿತ್ಯಕ್ಕಾಗಿ ಹಗಲಿರುಳು ದುಡಿದರು ಎಂದರು.

ADVERTISEMENT

ಅಂದು ಮುಂಬೈ ಪ್ರಾಂತ್ಯದಲ್ಲಿದ್ದ ಬಿಜಾಪುರದಲ್ಲಿ ಹತ್ತು ಕನ್ನಡ ಶಾಲೆಗಳನ್ನು ಆರಂಭಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಅವರು ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕ್ರಾಂತಿಕಾರಿ ಎನಿಸಿಕೊಂಡರು ಎಂದು ಹೇಳಿದರು.

ಇದೇ ವೇಳೆ ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಹಾಗೂ ಕಸಾಪ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಎಂ.ಎಸ್‌.ಮನೋಹರ (ಬೀದರ್), ಸಿದ್ದಲಿಂಗ ಚಿಂಚೋಳಿ (ಹುಮನಾಬಾದ), ಶಾಂತಲಿಂಗ ಮಠಪತಿ ( ಬಸವಕಲ್ಯಾಣ), ನಾಗರಾಜ ಹಾವಣ್ಣ (ಹುಲಸೂರ), ರಮೇಶ ಸಲಗರ (ಚಿಟ್ಟಗುಪ್ಪ) ಅವರನ್ನು ಸನ್ಮಾನಿಸಲಾಯಿತು.

ಪ್ರಜ್ವಲ್ ರಾಜೋಳೆ ಗುರು ಪೂಜೆಗೈದರು. ಸೋಮನಾಥ ರಾಜೇಶ್ವರ ಸ್ವಾಗತಿಸಿದರು. ರುದ್ರಮಣಿ ಮಠಪತಿ ನಿರೂಪಿಸಿದರು. ಸಂಗಮ್ಮ ಬಾಬುರಾವ ರಾಜೋಳೆ ದಂಪತಿ ದಾಸೋಹ ಸೇವೆಗೈದರು.

ಅಕ್ಕ ಅನ್ನಪೂರ್ಣ ನೇತೃತ್ವವಹಿಸಿದ್ದರು. ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗೋರ್ಟಾ(ಬಿ) ಗ್ರಾಮದ ಲಿಂಗಾಯತ ಮಹಾ ಮಠದ ಪೂಜ್ಯರಾದ ಪ್ರಭುದೇವರು ಹಾಗೂ ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ ಮಾತನಾಡಿದರು.

ಚಂದ್ರಕಾಂತ ಕಣಜೆ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲ ರೆಡ್ಡಿ, ಪೊಲೀಸ್‌ ಪಾಟೀಲ ಕರಕನಳ್ಳಿ, ಗಂಗಾಧರ ಪಾಟೀಲ ಕರಕನಳ್ಳಿ, ಚನ್ನಬಸವ ಹಂಗರಗಿ ಬೀದರ್ ಹಾಗೂ ಸಚಿದಾನಂದ ಮಠಪತಿ ಹುಮನಾಬಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.