ಬೀದರ್: ‘ಶುದ್ಧ ಪರಿಸರಕ್ಕಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶರತ್ ಹೇಳಿದರು.
ಇಲ್ಲಿಯ ಪ್ರತಾಪನಗರ ಬಡಾವಣೆಯಲ್ಲಿರುವ ಜನಸೇವಾ ಶಾಲೆಯಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ 5 ಸಾವಿರ ವಿವಿಧ ತಳಿಯ ಸಸಿಗಳು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪರಿಶುದ್ಧವಾದ ವಾತಾವರಣದಲ್ಲಿ ಮಕ್ಕಳು ಬೆಳೆಯಬೇಕು. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಬಣ್ಣಿಸಿದರು.
ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ‘ಜಿಲ್ಲೆಯ 8 ತಾಲ್ಲೂಕುಗಳಲ್ಲಿ 40 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಸಂದರ್ಭದಲ್ಲಿ ಹಣ ಕೊಟ್ಟು ಆಮ್ಲಜನಕ ಖರಿದಿ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ದೇಶದ ಪ್ರತಿಯೊಬ್ಬ ನಾಗರಿಕ ಕನಿಷ್ಠ ಒಂದಾದರೂ ಸಸಿ ನೆಟ್ಟು ಪೋಷಿಸಬೇಕು’ ಎಂದರು.
‘ಸಂಘ ಬರುವ ಐದು ವರ್ಷಗಳಲ್ಲಿ ಕನಿಷ್ಠ ಒಂದು ಕೋಟಿ ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದೆ. ಈ ವರ್ಷ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಸಸಿಗಳು ವಿತರಿಸಲಾಗಿದೆ’ ಎಂದರು.
ಜಿಲ್ಲೆಯ 18 ಸಂಘ, ಸಂಸ್ಥೆಗಳಿಗೆ ಮತ್ತು ರೈತರಿಗೆ ನಿಂಬೆ, ಹುಣಸೆ, ಚಿಕ್ಕು, ತೆಂಗು, ಪೇರಲ ಸೇರಿದಂತೆ ಒಟ್ಟು ಒಂಬತ್ತು ತರಹದ ಸಸಿಗಳನ್ನು ವಿತರಿಸಲಾಯಿತು.
ಜನಸೇವಾ ಶಾಲೆಯ ಹಿರಿಯ ನಿರ್ದೇಶಕ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ಬಡಾವಣೆಯ ಅಧ್ಯಕ್ಷ ಶರಣಪ್ಪ ಮಂಠಾಳೆ, ಅಶೋಕ ಮಹಾಲಿಂಗ, ಸಂಘದ ಸಂಯೋಜಕರಾದ ಸಚಿನ್ ನಾಗೂರೆ, ಗಣಪತಿ ಹಡಪದ್, ವಿನೋದ ಪಾಟೀಲ, ಸೋಮನಾಥಪ್ಪ, ಪ್ರಿಯಂಕಾ ಇದ್ದರು. ಗುರುನಾಥ ರಾಜಗೀರಾ ಸ್ವಾಗತಿಸಿದರು..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.