ADVERTISEMENT

ಪ್ರತಿಭಟನೆ ನಿಲ್ಲಿಸಲು ಪೊಲೀಸರ ಒತ್ತಡ

ಸಿಎಎ ವಿರೋಧಿಸಿ ಟ್ಯಾನರಿ ರಸ್ತೆಯಲ್ಲಿ ಮಹಿಳೆಯರಿಂದ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:40 IST
Last Updated 10 ಫೆಬ್ರುವರಿ 2020, 19:40 IST
ಸಿಎಎ ವಿರೋಧಿಸಿ ಟ್ಯಾನರಿ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು
ಸಿಎಎ ವಿರೋಧಿಸಿ ಟ್ಯಾನರಿ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು   

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಟ್ಯಾನರಿ ರಸ್ತೆಯಲ್ಲಿ ಹಮ್ಮಿಕೊಂಡ ಅನಿರ್ದಿಷ್ಟ ಅವಧಿ ಪ್ರತಿಭಟನೆ ಸೋಮವಾರವೂ ಮುಂದುವರಿದಿದ್ದು, ಪ್ರತಿಭಟನೆ ಮುಕ್ತಾಯಗೊಳಿಸದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

‘ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿ, ಮುಕ್ತಾಯಗೊಳಿಸುವಂತೆ ಮನವೊಲಿಸುತ್ತೇವೆ. ಮಾತು ಕೇಳದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಕೆ.ಜಿ. ಹಳ್ಳಿ ಪೊಲೀಸರು ಹೇಳಿದರು.

ಸಂಜೆ 5 ಗಂಟೆ ವೇಳೆಗೆ ಪ್ರತಿಭಟನೆ ಮುಕ್ತಾಯಗೊಳಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಪ್ರತಿಭಟನಕಾರರಿಗೆ ಶಾಮಿಯಾನ ಒದಗಿಸಿದವರಿಗೆ ಮತ್ತು ಆಡಿಯೊ ಸಾಧನಗಳನ್ನು ನೀಡಿದವರ ಮೇಲೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಪ್ರತಿಭಟನನಿರತರು ದೂರಿದರು.

ADVERTISEMENT

‘ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವುದರಿಂದ ಶಾಮಿಯಾನ ತೆರವುಗೊಳಿಸುವಂತೆ ಪೊಲೀಸರು ತಿಳಿಸಿದ್ದಾರೆ. ಮೂರು ದಿನ ಪ್ರತಿಭಟನೆ ನಡೆಸುವುದಾಗಿ ಸುತ್ತಮುತ್ತಲಿನ ಅಂಗಡಿ ಮಾಲೀಕರು, ಉದ್ಯಮಿಗಳ ಬಳಿ ತಿಳಿಸಿದ್ದೆವು. ಕೆಲವು ದಿನಗಳ ಬಳಿಕ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ಶಾಮಿಯಾನದ ಮಾಲೀಕ ಇಮ್ರಾನ್‌ ತಿಳಿಸಿದರು.

ಶನಿವಾರ ಪ್ರತಿಭಟನೆ ಆರಂಭಗೊಂಡಿದ್ದು, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಮೂರು ದಿನ ಪ್ರತಿಭಟನೆ ಹಮ್ಮಿಕೊಳ್ಳಲು ಮೊದಲು ನಿರ್ಧರಿಸಿದ್ದರೂ, ಸ್ಥಳೀಯರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದರಿಂದ ಅನಿರ್ದಿಷ್ಟ ಅವಧಿಗೆ ಮುಂದುವರಿಸಲು ಆಯೋಜಕರು ಉದ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.