ಬಸವಕಲ್ಯಾಣ: ‘ಸತ್ಯ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ’ ಎಂದು ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದ ಡಾ.ಬಸವಲಿಂಗ ಅವಧೂತರು ಹೇಳಿದರು. ತಾಲ್ಲೂಕಿನ ರಾಜೋಳಾದಲ್ಲಿ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತಿ, ನೆಮ್ಮದಿಗೆ ನಿತ್ಯ ದೇವರನ್ನು ಪೂಜಿಸಬೇಕು. ಗುರು, ತಂದೆ-ತಾಯಿಯ ಸೇವೆ ಮಾಡಬೇಕು. ಬೀದರ್ ಜಿಲ್ಲೆ ಬಸವಾದಿ ಶರಣರು ನಡೆದಾಡಿದ ಪುಣ್ಯ ಭೂಮಿ. ಇಲ್ಲಿ ನೆಲೆಸಿರುವ ಎಲ್ಲರೂ ಪುಣ್ಯವಂತರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು. ಆಧ್ಯಾತ್ಮಿಕ ಜಾಗೃತಿ, ಮಾನವೀಯ ಮೌಲ್ಯಗಳ ಬೋಧನೆ ಸೇರಿ ದೇಶಕ್ಕೆ ಸಾಧು, ಸಂತರು ನೀಡಿದ ಕೊಡುಗೆ ಅಪಾರವಾಗಿದೆ. ಸಾಧು, ಸಂತರ ದರ್ಶನ ಹಾಗೂ ವಾಣಿ ಆಲಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಯುವ ಮುಖಂಡ ಸಿದ್ದು ಪಾಟೀಲ ಹುಮನಾಬಾದ್, ಗ್ರಾಮದ ಮುಖಂಡರಾದ ಬಸಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಅಣ್ಣೆಪ್ಪ ಹುಗ್ಗೆ, ಅನಿಲಕುಮಾರ ಹುಮನಾಬಾದೆ, ಪರಮೇಶ್ವರ ಸಜ್ಜನಶೆಟ್ಟಿ, ಆನಂದ ಸ್ವಾಮಿ ಹಾಗೂ ಸುನೀಲ್ ಮಾನೆ ಇದ್ದರು.
ಇದಕ್ಕೂ ಮೊದಲು ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಲಕ್ಷ್ಮಿ ದೇವಸ್ಥಾನದವರೆಗೆ ಬಸವಲಿಂಗ ಅವಧೂತರ ಮೆರವಣಿಗೆ ನಡೆಯಿತು. ಕುಂಭ ಕಳಶ ಹೊತ್ತ ಮಹಿಳೆಯರು, ಕೋಲಾಟ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ನೂರಾರು ಜನ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.