ಬಸವಕಲ್ಯಾಣ: ತಾಲ್ಲೂಕಿನ ಗೋರಟಾ(ಬಿ)ದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ಸ್ಮರಣಾರ್ಥ ನಿರ್ಮಿಸುತ್ತಿರುವ ಸ್ಮಾರಕ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ವಿಶ್ವಕ್ರಾಂತಿ ದಿವ್ಯ ಪೀಠದಿಂದ ಎರಡು ದಿನಗಳಿಂದ ನಡೆಯುತ್ತಿರುವ ಧರಣಿ ಬುಧವಾರವೂ ಮುಂದುವರಿಯಿತು.
ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಧರಣಿಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ವಾರಕರಿ ಪರಿಷತ್ತಿನ ಪ್ರವಕ್ತಾ ನಿವೃತ್ತಿ ಮಹಾರಾಜ ಹಾಲಳ್ಳಿಕರ್, ಜೈರಾಜ ಕೊಳ್ಳಾ, ಕೇಶವ ಮಹಾರಾಜ ಕೋರೂರ, ವಿಠಲ್ ಮಹಾರಾಜ, ಹರೀಶ ಮಾನಕರೆ ಘಾಟಬೋರಾಳ, ನಿವೃತ್ತ ಶಿಕ್ಷಕ ಚನ್ನಬಸಪ್ಪ ಪತಂಗೆ ಹಾಗೂ ಊರಿನ ಮಹಿಳೆಯರು ಧರಣಿಯನ್ನು ಬೆಂಬಲಿಸಿ ಪಾಲ್ಗೊಂಡಿದ್ದರು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ದಿನದಂದು ಮನವಿಪತ್ರ ಸಲ್ಲಿಸಿ ಧರಣಿ ಅಂತ್ಯಗೊಳಿಸಲಾಗುತ್ತದೆ ಎಂದು ಓಂಪ್ರಕಾಶ ರೊಟ್ಟೆ ಹೇಳಿದ್ದಾರೆ.
‘ಆರು ವರ್ಷಗಳ ಹಿಂದೆ ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಇದುವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಗೋರಟಾ ಹತ್ಯಾಕಾಂಡವನ್ನು ಎರಡನೇ ಜಲಿಯನವಾಲಾ ಬಾಗ ಹತ್ಯಾಕಾಂಡ ಎನ್ನಲಾಗುತ್ತದೆ. ಆದ್ದರಿಂದ ಇದರ ಮಹತ್ವ ಅರಿತು ಸ್ಮಾರಕದ ಕೆಲಸ ಶೀಘ್ರ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.