ಬೀದರ್: ಇಲ್ಲಿನ ಜೆಸ್ಕಾಂ ಕಚೇರಿ ಸಮೀಪದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿ 348ನೇ ಆರಾಧನಾ ಮಹೋತ್ಸವ ಶುಕ್ರವಾರ ಆರಂಭವಾಯಿತು.
ಬೆಳಗಿನ ಜಾವ ಸುಪ್ರಭಾತದೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಷ್ಣು ಸಹಸ್ರ ನಾಮ, ರಾಯರ ಅಷ್ಟೋತ್ತರ ಪಾರಾಯಣ ನಡೆಯಿತು.
ಬೆಳಿಗ್ಗೆ ಧ್ವಜಾರೋಹಣದ ನಂತರ ಪ್ರಹ್ಲಾದರಾಜರ ಪಲ್ಲಕ್ಕಿ ಹಾಗೂ ರಾಘವೇಂದ್ರ ಸ್ವಾಮಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಆರಾಧನಾ ಮಹೋತ್ಸವ ಪ್ರಯುಕ್ತ ರಾಯರ ವೃಂದಾವನಕ್ಕೆ ಹಣ್ಣಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು.
ಶನಿವಾರ ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, ವಿಷ್ಣು ಸಹಸ್ರ ನಾಮ, ರಾಯರ ಅಷ್ಟೋತ್ತರ ಪಾರಾಯಣ, ಕ್ಷೀರಾಭಿಷೇಕ , ಪಂಚಾಮೃತ ಅಭಿಷೇಕ ಮತ್ತಿತರ ಕಾರ್ಯಗಳು ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಗಾಯಕಿ ಮಹಾಲಕ್ಷ್ಮಿ ಶೆಣೈ ದಾಸಲಹರಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.
ಅಗಸ್ಟ್ 18 ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆಯ ವರೆಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.