ADVERTISEMENT

ಅಂಜನಾದ್ರಿ ಬೆಟ್ಟಕ್ಕೆ ರಾಮಾಯಣ ಸರ್ಕ್ಯೂಟ್‌ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 11:39 IST
Last Updated 23 ಡಿಸೆಂಬರ್ 2019, 11:39 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ರಾಮಾಯಣ ಸರ್ಕ್ಯೂಟ್‌ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಸನ್ಮಾನಿಸಿದರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ರಾಮಾಯಣ ಸರ್ಕ್ಯೂಟ್‌ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಸನ್ಮಾನಿಸಿದರು   

ಗಂಗಾವತಿ: ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯೆಯ ರಾಮಾಯಣ ಸರ್ಕ್ಯೂಟ್‌ನ ಅಧ್ಯಕ್ಷ ಡಾ.ರಾಮ್ ಅತ್ತುರ್ ಭಾನುವಾರ ಭೇಟಿ ನೀಡಿ, ಆಂಜನೇಯ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿ, ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಶ್ರೀರಾಮನ ಭಕ್ತನಾಗಿರುವ ಹನುಮ ಹುಟ್ಟಿದ ಅಂಜನಾದ್ರಿ ಬೆಟ್ಟಕ್ಕೆ ಬಂದು, ಅಂಜನಾದೇವಿಗೆ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಅಲೋಕ್‍ಕುಮಾರ ಮಾತನಾಡಿ,‘ರಾಮ ಮಂದಿರ ನಿರ್ಮಾಣ ವಿಳಂಬವಾಗುವುದಿಲ್ಲ. ಕೋರ್ಟ್ ಆದೇಶದಂತೆ ಟ್ರಸ್ಟ್ ರಚಿಸಿಕೊಂಡು ಮಂದಿರ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗುವುದು. ರಾಮ ನಡೆದಾಡಿದ ಎಲ್ಲ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದರು.

ADVERTISEMENT

ಇನ್ನೂ ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ದೇಶದ ಜನರಿಗೆ ತಪ್ಪು ಮಾಹಿತಿ ನೀಡಿ, ದೇಶದಲ್ಲಿ ಗಲಭೆ ಮಾಡಿಸಲಾಗುತ್ತಿದೆ. ಬೇರೆ ರಾಷ್ಟ್ರಗಳಿಂದ ಭಾರತಕ್ಕೆ ಬಂದು ನೆಲೆಸಿರುವವರಿಗೆ ಈ ಕಾನೂನು ಅನ್ವಯವಾಗುತ್ತದೆ. ಭಾರತೀಯ ಮುಸ್ಲಿಮರು ಭಾರತೀಯ ಪೌರರು, ಅವರ ಪೌರತ್ವಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ತಪ್ಪು ಮಾಹಿತಿಗಳಿಗೆ ಭಾರತೀಯ ಪ್ರಜೆಗಳು ಕಿವಿಕೊಡಬಾರದು ಎಂದು ಹೇಳಿದರು.

ಶಾಸಕ ಪರಣ್ಣ ಮುನವಳ್ಳಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ್‌ ಹಾಗೂ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.